ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ನವೋದಯ ಕಾಲೇಜು ಎದುರು ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಆತ್ಮಹತ್ಯೆ ಸಂಶಯಾಸ್ಪದವಾಗಿದ್ದು, ತನಿಖೆಯಿಂದ ಮಾತ್ರ ಸತ್ಯಾಂಶ ಗೊತ್ತಾಗಲಿದೆ. ಈ ಬಗ್ಗೆ ಮೂಡಿರುವ ಅನುಮಾನಗಳನ್ನು ಪೊಲೀಸರು ತನಿಖೆಯ ಮೂಲಕ ದೂರ ಮಾಡಬೇಕಿದೆ. ಆತ್ಮಹತ್ಯೆ ಘಟನೆಯಿಂದ ವಿದ್ಯಾರ್ಥಿ ಸಮೂಹವು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.
ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಇಲ್ಲದಿದ್ದರೆ ವಿದ್ಯಾಭ್ಯಾಸ ಮುಂದುವರಿಸುವುದು ದುಸ್ತರವಾಗುತ್ತದೆ. ಈ ವಿಷಯದಲ್ಲಿ ಯಾವುದೇ ರಾಜಕೀಯ ಬೆರೆಸಬಾರದು ಹಾಗೂ ತನಿಖೆ ನಡೆಸಲು ಮೀನಾಮೇಷ ಎಣಿಸಬಾರದು ಎಂದು ಕೋರಿದರು.
ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಬೆಂಬಲ ನೀಡಿವೆ. ತನಿಖೆ ಆರಂಭಿಸದಿದ್ದರೆ ಮತ್ತೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿವೆ.
ಹಿನ್ನೆಲೆ: ನವೋದಯ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಐದನೇ ಸೆಮಿಸ್ಟರ್ ಓದುತ್ತಿದ್ದ ವಿದ್ಯಾರ್ಥಿನಿ ಮಧು ಪತ್ತಾರ್ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಮಾಣಿಕಪ್ರಭು ದೇವಸ್ಥಾನದ ಬಳಿ ಕಳೆದ ಸೋಮವಾರ ಸಂಜೆ ಪತ್ತೆಯಾಗಿತ್ತು.
ಶನಿವಾರ ಬೆಳಿಗ್ಗೆ ಮನೆಯಿಂದ ಹೋಗಿದ್ದ ವಿದ್ಯಾರ್ಥಿನಿ ವಾಪಸ್ ಬಂದಿರಲಿಲ್ಲ. ಇದರಿಂದ ಆತಂಕಗೊಂಡಿದ್ದ ಪಾಲಕರು ಹುಡುಕಾಟ ಆರಂಭಿಸಿದ್ದರು. ಪುತ್ರಿಯ ಆತ್ಮಹತ್ಯೆ ಅನುಮಾನಾಸ್ಪದವಾಗಿದೆ ಎಂದು ಪಾಲಕರು ನೇತಾಜಿ ನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪಾಲಕರ ದೂರನ್ನು ಬೆಂಬಲಿಸಿರುವ ಕಾಲೇಜು ವಿದ್ಯಾರ್ಥಿಗಳು ತನಿಖೆಗೆ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.