ರಾಯಚೂರು: ತುಂಗಭದ್ರಾ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಕಳಪೆ ಮಟ್ಟದಲ್ಲಿ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷಿ ಅವರು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೆಗೌಡರ ಕನಸಿನ ಕೂಸು ಎನ್ಆರ್ಬಿಸಿ ಯೋಜನೆ. ಈಗ ನಾಲೆಯ ಆಧುನೀಕರಣಕ್ಕೆ ₹956 ಕೋಟಿ ಬಿಡುಗಡೆಯಾಗಿದ್ದು ಕಳಪೆ ಕಾಮಗಾರಿ ಮಾಡಲಾಗುತ್ತಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿಳಿಸಿದರೆ ಪರಿಶೀಲನೆ ಮಾಡದೇ ಉಡಾಫೆಯ ಉತ್ತರ ನೀಡಿದ್ದಾರೆ. ಕೊರೊನಾ ವಿಷಯಕ್ಕೆ ಮಾತ್ರ ಸೀಮಿತರಾಗಿದ್ದು ಇಷ್ಟು ದೊಡ್ಡ ಕಾಮಗಾರಿಯನ್ನು ಹಗುರವಾಗಿ ಪರಿಗಣಿಸಿದಂತಿದೆ ಎಂದು ದೂರಿದರು.
ಜಿಲ್ಲೆಯ ಶಾಸಕರಿಗೆ ರೈತರ ಅಭಿವೃದ್ದಿ ಪರ ಕಾಳಜಿಯಿದ್ದರೆ ಕಳಪೆ ಕಾಮಗಾರಿಯ ಕುರಿತು ಚರ್ಚಿಸಿ ಧ್ವನಿ ಎತ್ತಬೇಕು. ಕೆಬಿಜೆಎನ್ಎಲ್ ಅಧಿಕಾರಿ ಹಾಗೂ ಗುತ್ತಿಗೆದಾರರ ಬಳಿ ಬೇರೆ ಬೇರೆ ಎಸ್ಟಿಮೆಟ್ ಇದ್ದು ಗೊಂದಲ ಮುಡಿಸಿದೆ. ಮುಂದಿನ ದಿನಗಳಲ್ಲಿ ಪಕ್ಷದ ನಿಯೋಗದಿಂದ ರಾಜ್ಯ ಸರ್ಕಾರಕ್ಕೆ ಕಳಪೆ ಕಾಮಗಾರಿಯ ಕುರಿತು ಗಮನಕ್ಕೆ ತರುತ್ತೇವೆ. ನೀರಾವರಿಯ ಶಾಶ್ವತ ಆಧುನೀಕರಣಕ್ಕೆ ಮುಂದಾಬೇಕು ಎಂದು ಒತ್ತಾಯಿಸಿದರು.
ಉಸ್ತುವಾರಿ ಸಚಿವರು ಜಿಲ್ಲೆಯ ಸಮಸ್ಯೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಕಾಟಾಚಾರಕ್ಕೆ ಬಂದು ಹೋಗುತ್ತಾರೆ. ಸ್ಥಳೀಯ ಶಾಸಕರಿಗೆ ಮಂತ್ರಿ ಸ್ಥಾನ ನೀಡಿದ್ದಲ್ಲಿ ಅಭಿವೃದ್ಧಿಗೆ ಒತ್ತು ನೀಡಬಹುದಾಗಿತ್ತು ಎಂದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಶಿವಶಂಕರ ವಕೀಲ, ವಿಶ್ವನಾಥ ಪಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.