ADVERTISEMENT

ಜಾನುವಾರುಗಳಿಗೆ ಲಸಿಕೆ ಮರೆಯಬೇಡಿ

ಎಲ್ಲ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಲಸಿಕೆ ಲಭ್ಯ: ಡಾ.ಶಿವಣ್ಣ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 14:50 IST
Last Updated 20 ಅಕ್ಟೋಬರ್ 2020, 14:50 IST
ಡಾ.ಶಿವಣ್ಣ
ಡಾ.ಶಿವಣ್ಣ   

ರಾಯಚೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೇಶಕ ಡಾ.ಶಿವಣ್ಣ ಅವರೊಂದಿಗೆ ‘ಪ್ರಜಾವಾಣಿ’ ಫೋನ್‌ ಇನ್‌ ‘ಕಾಲ್‌ ಮಾಡಿ ಸಮಸ್ಯೆ ಹೇಳ್ಕೊಳ್ಳಿ’ ಕಾರ್ಯಕ್ರಮವು ಮಂಗಳವಾರ ಬೆಳಿಗ್ಗೆ 10 ರಿಂದ 11 ರವರೆಗೂ ನಡೆಯಿತು.

ಜಿಲ್ಲೆಯ ವಿವಿಧ ಭಾಗಗಳಿಂದ ಹಲವು ಕರೆಗಳು ಬಂದವು. ಮಳೆಗಾಲದಲ್ಲಿ ಜಾನುವಾರುಗಳು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತವೆ. ಪಶುವೈದ್ಯ ಆಸ್ಪತ್ರೆಯಲ್ಲಿ ಎಲ್ಲ ಜಾನುವಾರುಗಳಿಗೆ ಸಾಕಾಗುವಷ್ಟು ಲಸಿಕೆ ಲಭ್ಯವಿದೆಯೇ ಎನ್ನುವ ಎಂಬಿತ್ಯಾದಿ ಪ್ರಶ್ನೆಗಳನ್ನು ರೈತರು, ಕುರಿ ಸಾಕಣೆದಾರರು ಕೇಳಿದರು.

ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ್ದಲ್ಲದೆ, ಜಾನುವಾರುಗಳಿಗೆ ಸಮರ್ಪಕ ವೈದ್ಯಕೀಯ ಚಿಕಿತ್ಸೆ ದೊರಕದಿದ್ದರೆ ಕರೆ ಮಾಡಿ ಎಂದು ಮೊಬೈಲ್‌ ಸಂಖ್ಯೆ ನೀಡಿದರು.

ADVERTISEMENT

* ಕುರಿ ಹಾಗೂ ಮೇಕೆಗಳು ಇದ್ದಕ್ಕಿದ್ದಂತೆ ಸಾಯುತ್ತಿದ್ದು, ಇದಕ್ಕೆ ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ ಎನ್ನುವ ಪ್ರಶ್ನೆಯನ್ನು ಅನೇಕ ಜನರು ಕೇಳಿದರು.

– ಕುರಿಗಳು ಹಾಗೂ ಮೇಕೆಗಳು ಮಳೆಗಾಲದಲ್ಲಿ ಹೆಚ್ಚು ಅನಾರೋಗ್ಯಕ್ಕೆ ಇಡಾಗುತ್ತವೆ. ಅದರಲ್ಲಿ ಮುಖ್ಯವಾಗಿ ಕಾಲುಕೊಳೆ ಕಾಣಿಸುವುದು ಸಾಮಾನ್ಯ. ತೇವ ಇರುವ ಜಾಗದಲ್ಲಿ ಅವುಗಳನ್ನು ನಿಲ್ಲಿಸುವುದರಿಂದ ಕಾಲಿನ ಸಂದುಗಳಲ್ಲಿ ಕೆಸರು ಅಥವಾ ತೇವಾಂಶ ಸೇರಿಕೊಳ್ಳುತ್ತದೆ. ಸಾಧ್ಯವಾದಷ್ಟು ಒಣನೆಲದಲ್ಲಿ ಇರಿಸಿದರೆ ಈ ಸಮಸ್ಯೆ ದೂರವಾಗುತ್ತದೆ. ಅನಾರೋಗ್ಯ ಕಂಡುಬಂದಾಗ ಕೂಡಲೇ ಪಶುವೈದ್ಯರಿಗೆ ತೋರಿಸಬೇಕು.

* ದನಕರುಗಳ ಮೈ ತುಂಬ ಗಂಟುಗಳು ಕಾಣಿಸಿಕೊಂಡಿವೆ. ಸರಿಯಾಗಿ ಮೇವು ತಿನ್ನುತ್ತಿಲ್ಲ. ಏನು ಮಾಡಬೇಕು?

ಇದೇ ವರ್ಷ ಹೊಸದಾಗಿ ಲಂಪಿಸ್ಕೀನ್‌ ಡಿಸೀಜ್‌ (ಎಲ್‌ಎಸ್‌ಡಿ) ಎನ್ನುವ ರೋಗ ಕಲ್ಯಾಣ ಕರ್ನಾಟಕ ಭಾಗದ ಜಾನುವಾರುಗಳಲ್ಲಿ ಕಾಣಿಸಿಕೊಂಡಿದೆ. ಈ ರೋಗಕ್ಕೆ ಪ್ರತ್ಯೇಕ ವಿಶೇಷ ಲಸಿಕೆಯನ್ನು ಕಂಡುಹಿಡಿದಿಲ್ಲ. ಆದರೆ, ಕುರಿಗಳಿಗೆ ನೀಡುವ ರೋಗ ನಿರೋಧಕ ಶಕ್ತಿ (ಕ್ರಾಸ್‌ ಇಮ್ಯುನಿಟಿ)ಯ ಲಸಿಕೆ ದನಕರುಗಳಿಗೆ ನೀಡಲಾಗುತ್ತಿದೆ. ಇದರಿಂದ ದನಕರುಗಳು ರೋಗದಿಂದ ಚೇತರಿಸಿಕೊಳ್ಳುತ್ತಿವೆ.

20 ಸಾವಿರ ಲಸಿಕೆಗಳನ್ನು ತರಿಸಿಕೊಳ್ಳಲಾಗಿದ್ದು, ಚರ್ಮಗಂಟು ರೋಗ ಕಾಣಿಸಿರುವ ಜಾನುವಾರುಗಳಿಗೆ ಕೂಡಲೇ ಲಸಿಕೆ ಹಾಕಿಸಬೇಕು. ಜಿಲ್ಲೆಯ ಎಲ್ಲ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಈ ಸೇವೆ ಲಭ್ಯವಿದೆ. ದನಗಳನ್ನು ಕಚ್ಚುವ ಸೊಳ್ಳೆ, ನೊಣ, ಉಣ್ಣೆಗಳಿಂದ ಬಹುಬೇಗ ಇದು ಹರಡುತ್ತದೆ. ಮಳೆಗಾಲದಲ್ಲಿ ಹೆಚ್ಚು ಪಸರಿಸುತ್ತದೆ.

ಕಣ್ಣುಗಳಲ್ಲಿ ನೀರು ಸೋರುವುದು, ನಿಶ್ಯಕ್ತಿ, ಕಾಲುಗಳಲ್ಲಿ ಬಾವು ಹಾಗೂ ಕುಂಟುವುದು, ಚರ್ಮದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಹಾಲಿನ ಇಳುವರಿ ಕಡಿಮೆಯಾಗಿ, ಗರ್ಭಪಾತವಾಗುವ ಸಾಧ್ಯತೆಯೂ ಇರುತ್ತದೆ. ತೀವ್ರ ಬಳಲುವ ಕರುಗಳು ಸಾವನ್ನಪ್ಪುತ್ತವೆ. ಮಳೆಗಾಲದಲ್ಲಿ ಜಾನುವಾರುಗಳಿಗೆ ಗುಂಡಿಗಳಲ್ಲಿ ಸಂಗ್ರಹವಾಗುವ ನೀರು ಕುಡಿಸಬಾರದು. 105 ಫರ್ಹಾಟ್‌ ಜ್ವರ ಕಾಣಿಸಿಕೊಂಡಾಗ, ಮೈಮೇಲೆ ಕೆಲಹೊತ್ತು ಹಸಿಬಟ್ಟೆ ಹಾಕಬೇಕು. ಚರ್ಮದ ಮೇಲೆ ಕಾಣಿಸಿಕೊಳ್ಳುವ ಗಾಯವನ್ನು ಪೋಟ್ಯಾಷಿಯಂ ಪರಮ್ಯಾಂಗನೇಟ್‌ ದ್ರಾವಣದಿಂದ ತೊಳೆದು ಅಯೋಡಿನ್‌ ದ್ರಾವಣ, ಮುಲಾಮು ಹಾಗೂ ಬೇವಿನ ಎಣ್ಣೆ ಲೇಪಿಸಬೇಕು.

* ಚರ್ಮಗಂಟು ರೋಗವು ಬೇರೆ ದನಕರುಗಳಿಗೆ ಹರಡದಂತೆ ಏನು ಕ್ರಮ ಕೈಗೊಳ್ಳಬೇಕು?

– ಚರ್ಮಗಂಟು ಕಾಣಿಸಿಕೊಂಡ ರೋಗಗ್ರಸ್ಥ ಜಾನುವಾರುಗಳನ್ನು ಬೇರ್ಪಡಿಸಬೇಕು. ಚಿಕಿತ್ಸೆಗಾಗಿ ಬಳಕೆ ಮಾಡುವ ಪ್ರತಿಯೊಂದು ಸಾಮಗ್ರಿಗಳನ್ನು ಸ್ವಚ್ಛಗೊಳಿಸಬೇಕು. ಹಸಿರು ಮೇವು, ಪೌಷ್ಟಿಕ ಆಹಾರ ಒದಗಿಸಬೇಕು. ಕುಡಿಯುವ ನೀರಿನಲ್ಲಿ ಬೆಲ್ಲ, ಉಪ್ಪು ಹಾಗೂ ಅಡುಗೆಸೋಡಾ ಹಾಕಿ ದಿನಕ್ಕೆ 5 ರಿಂದ 6 ಬಾರಿ ಕುಡಿಸಬೇಕು. ಕೀಟಗಳ ಹಾವಳಿ ತಪ್ಪಿಸುವುದಕ್ಕಾಗಿ ಹಸಿಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಸೊಳ್ಳೆ, ನೊಣ ಹಾಗೂ ಇತರೆ ಕೀಟಗಳ ಹಾವಳಿ ತಪ್ಪುಸುವುದಕ್ಕಾಗಿ ಫಾರ್ಮಾಲಿನ್‌ (ಶೇ 1), ಫಿನೈಲ್‌ (ಶೇ 2) ಅಥವಾ ಸೋಡಿಯಂ ಹಯಪೋಕ್ಲೋರೇಟ್‌ (ಶೇ 2) ದಿನಕ್ಕೆ ಎರಡು ಬಾರಿ ಸಿಂಪಡಿಸಬೇಕು. ಒಂದು ವೇಳೆ ರೋಗಗ್ರಸ್ಥ ಜಾನುವಾರು ಮರಣವಾದರೆ, ಆಳವಾದ ಗುಂಡಿಯಲ್ಲಿ ಹೊಳಬೇಕು.

* ಕವಿತಾಳ ಹೋಬಳಿಯಲ್ಲಿ 23 ಸಾವಿರ ಕುರಿಗಳಿದ್ದರೂ, ಬರೀ 3 ಸಾವಿರ ಲಸಿಕೆ ಕಳುಹಿಸಲಾಗಿದೆ. ಇದರಿಂದ ಎಲ್ಲ ಕುರಿಗಳಿಗೆ ಲಸಿಕೆ ಹೇಗೆ ಹಾಕುತ್ತಾರೆ?

– ಜಾನುವಾರುಗಳು ಎಷ್ಟಿವೆ ಅಷ್ಟು ಲಸಿಕೆಗಳ ಲಭ್ಯತೆ ಇದೆ. ಪ್ರತಿಯೊಂದು ಹಂತಹಂತವಾಗಿ ನಡೆಯುವುದರಿಂದ ಅಗತ್ಯ ಲಸಿಕೆಗಳನ್ನು ಮತ್ತೆ ಪಡೆದುಕೊಳ್ಳುತ್ತೇವೆ. ಕವಿತಾಳದಲ್ಲಿ ಈಗಾಗಲೇ ಕುರಿಗಳಿಗೆ ಲಸಿಕೆ ನೀಡುವ ಕೆಲಸ ನಡೆಯುತ್ತಿದೆ. ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ಸಿಗದೆ ಇದ್ದ ಪಕ್ಷದಲ್ಲಿ ನೇರವಾಗಿ ನಮ್ಮ ಕಚೇರಿಗೆ ಮಾಹಿತಿ ಕೊಡಿ. ಪಶುವೈದ್ಯರು ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದಾರೆ. ಚುಚ್ಚುಮದ್ದು ಕೊಡುವುದಕ್ಕೆ ವೈದ್ಯರು ಪ್ರತಿದಿನ ಬೆಳಿಗ್ಗೆ ಗ್ರಾಮಗಳಿಗೆ ಸಂಚರಿಸುತ್ತಿದ್ದಾರೆ.

* ರಾಯಚೂರು ತಾಲ್ಲೂಕು ಸಗಮಕುಂಟಾ ಭಾಗದಲ್ಲಿ ಕುರಿಗಳು ಕಾಲುರೋಗ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿವೆ? ಏನಾದರೂ ಕ್ರಮ ಕೈಗೊಳ್ಳಬೇಕು?

– ಜಾನುವಾರುಗಳಲ್ಲಿ ಕಾಲು ಬಾಯಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಪ್ರತಿವರ್ಷ ತಪ್ಪದೇ ಇದಕ್ಕಾಗಿ ಲಸಿಕೆ ನೀಡುವುದನ್ನು ಇಲಾಖೆಯಿಂದ ಮುಂದುವರಿಸಲಾಗಿದೆ. ಸಗಮಕುಂಟಾ ಗ್ರಾಮದಲ್ಲಿ ಏನಾದರೂ ಎಂಬುದನ್ನು ಮಾಹಿತಿ ಪಡೆದು, ಎಲ್ಲ ಜಾನುವಾರುಗಳಿಗೂ ಯೋಗ್ಯ ಚಿಕಿತ್ಸೆ ದೊರಕಿಸಲಾಗುವುದು. ಕಲುಷಿತವಾದ ನೀರು, ಮೇವು ಸೇವನೆಯಿಂದ ಈ ರೋಗ ಬರುತ್ತದೆ. ಈ ಸಂದರ್ಭದಲ್ಲಿ ಜಾನುವಾರುಗಳಿಗೆ ಗಂಜಿ, ಬಾಳೆಹಣ್ಣು, ರಾಗಿ, ಅಂಬಲಿ ತಿನಿಸಬೇಕು. ರೋಗನಿರೋಧಕ ಚುಚ್ಚುಮದ್ದು ಮತ್ತು ವಿಟಮಿನ್‌ ಚುಚ್ಚುಮದ್ದು ಕೊಡಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.