ADVERTISEMENT

ರಾಯಚೂರು: ‘ಬಟ್ಟೆ ಕಳಚಿ ದೇವರ ದರ್ಶನ ಮಾಡುವ ಸಂಸ್ಕೃತಿ ಬೇಡ’

ತಿಂಥಣಿ ಕನಕಗುರು ಪೀಠದಲ್ಲಿ ಹಾಲುಮತ ಸಂಸ್ಕೃತಿ ವೈಭವ ಸಮಾರೋಪ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 13:50 IST
Last Updated 14 ಜನವರಿ 2021, 13:50 IST
ರಾಯಚೂರು ಜಿಲ್ಲೆಯ ತಿಂಥಣಿ ಬ್ರಿಡ್ಜ್‌ ಗುಡ್ಡದಲ್ಲಿರುವ ಕಲಬುರ್ಗಿ ವಿಭಾಗೀಯ ಕನಕಗುರು ಪೀಠದಲ್ಲಿ ಮೂರು ದಿನಗಳಿಂದ ನಡೆದ ಹಾಲುಮತ ಸಂಸ್ಕೃತಿ ವೈಭವದ ಕೊನೆಯ ದಿನ ಗುರುವಾರ ಆಯೋಜಿಸಿದ್ದ ‘ಸಿದ್ದರಾಮೇಶ್ವರ ಬೊಮ್ಮಗೊಂಡೇಶ್ವರ ಉತ್ಸವ’ದಲ್ಲಿ ಪೀಠದ ಮುಖ್ಯಸ್ಥ ಸಿದ್ದರಾಮಾನಂದ ಸ್ವಾಮಿ ಮಾತನಾಡಿದರು
ರಾಯಚೂರು ಜಿಲ್ಲೆಯ ತಿಂಥಣಿ ಬ್ರಿಡ್ಜ್‌ ಗುಡ್ಡದಲ್ಲಿರುವ ಕಲಬುರ್ಗಿ ವಿಭಾಗೀಯ ಕನಕಗುರು ಪೀಠದಲ್ಲಿ ಮೂರು ದಿನಗಳಿಂದ ನಡೆದ ಹಾಲುಮತ ಸಂಸ್ಕೃತಿ ವೈಭವದ ಕೊನೆಯ ದಿನ ಗುರುವಾರ ಆಯೋಜಿಸಿದ್ದ ‘ಸಿದ್ದರಾಮೇಶ್ವರ ಬೊಮ್ಮಗೊಂಡೇಶ್ವರ ಉತ್ಸವ’ದಲ್ಲಿ ಪೀಠದ ಮುಖ್ಯಸ್ಥ ಸಿದ್ದರಾಮಾನಂದ ಸ್ವಾಮಿ ಮಾತನಾಡಿದರು   

ಜಾಲಹಳ್ಳಿ: ‘ಬಟ್ಟೆ ಕಳಚಿಕೊಂಡು ದೇವರ ದರ್ಶನ ಮಾಡುವಂತಹ ಸಂಸ್ಕೃತಿ ಅಪ್ಪಿಕೊಳ್ಳುವುದನ್ನು ಜನರು ಬಿಡಬೇಕು. ಹಿಂದಿನ ಪರಂಪರೆಯನ್ನು ಉಳಿಸಿ, ಬೆಳೆಸಬೇಕು’ ಎಂದು ತಿಂಥಣಿ ಬ್ರಿಡ್ಸ್‌ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮಿ ಹೇಳಿದರು.

ಇಲ್ಲಿನ ತಿಂಥಣಿ ಬ್ರಿಡ್ಜ್‌ ಗುಡ್ಡದಲ್ಲಿರುವ ಕಲಬುರ್ಗಿ ವಿಭಾಗೀಯ ಕನಕಗುರು ಪೀಠದಲ್ಲಿ ಮೂರು ದಿನಗಳಿಂದ ನಡೆದ ಹಾಲುಮತ ಸಂಸ್ಕೃತಿ ವೈಭವದ ಕೊನೆಯ ದಿನ ಗುರುವಾರ ಆಯೋಜಿಸಿದ್ದ ‘ಸಿದ್ದರಾಮೇಶ್ವರ ಬೊಮ್ಮಗೊಂಡೇಶ್ವರ ಉತ್ಸವ’ದಲ್ಲಿ ಮಾತನಾಡಿದರು.

‘ಮನುಷ್ಯರನ್ನು ಸರಿಮಾನವಾಗಿ ನೋಡುವಂತಹ ಹಾಲಮತ ಸಾಂಸ್ಕೃತಿಯನ್ನು ಮರೆಯಬೇಡಿ. ಪ್ರಸಕ್ತ ದಿನಮಾನಗಳಲ್ಲಿ ರಾಜಕಾರಣದ ನಾಯಕರು ತಮ್ಮ ಮನೆಯ ಬಾಗಿಲು ಕಾಯುವಂತವರಿಗೆ ಎಲ್ಲಾ ಅಧಿಕಾರ ಕಲ್ಪಿಸುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.

ADVERTISEMENT

ಕುರುಬ ಸಮುದಾಯದ ಮುಖಂಡ ವರ್ತೂರ್ ಪ್ರಕಾಶ್ ಮಾತನಾಡಿ, ‘ಕುರುಬರಿಗೆ ಎಸ್‌ಟಿ ಮೀಸಲಾತಿ ನೀಡುವ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಾಟಕವಾಡುತ್ತಿದೆ. ಯಾರಿಗೂ ಕುರುಬರ ಬಗ್ಗೆ ಕಾಳಜಿ ಇಲ್ಲ. ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿಸಬೇಕಿತ್ತು, ಆದರೆ ಆ ಕೆಲಸ ಅವರು ಮಾಡಲಿಲ್ಲ. ಆದರೆ ಕುರುಬ ಸಮುದಾಯದ ಪ್ರಶ್ನಾತೀತ ನಾಯಕ ಸಿದ್ಧರಾಮಯ್ಯ. ಅವರು ಮತ್ತೆ ಅಧಿಕಾರಕ್ಕೆ ಬಂದರೆ ಎಸ್‌ಟಿ ಮೀಸಲಾತಿ ನೀಡಬಹುದು. ಹೀಗಾಗಿ ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ಕುರುಬರೆಲ್ಲರೂ ಒಗ್ಗಟ್ಟಾಗಬೇಕು’ ಎಂದು ಕರೆ ನೀಡಿದರು.

‘ಎಸ್‌ಟಿ ಮೀಸಲಾತಿಗಾಗಿ ಸಚಿವ ಈಶ್ವರಪ್ಪ ಹಾಗೂ ಬಿಜೆಪಿ ಸರ್ಕಾರ ನಾಟಕವಾಡುತ್ತಿದೆ. ಈಶ್ವರಪ್ಪ ಅವರಿಗೆ ಸಮುದಾಯದ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬರಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.