ADVERTISEMENT

ರಾಯಚೂರು ಜಿಪಂ ವಿಸರ್ಜಿಸಲು ಕಾರಣ ಕೇಳಿ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 14:20 IST
Last Updated 31 ಜುಲೈ 2019, 14:20 IST

ರಾಯಚೂರು: ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993 ಪ್ರಕರಣ 263 ರಡಿ ಜವಾಬ್ದಾರಿಗಳನ್ನು ನಿರ್ವಹಿಸಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಚುನಾಯಿತ ಸದಸ್ಯರೆಲ್ಲರೂ ವಿಫಲರಾಗಿದ್ದು, ಜಿಲ್ಲಾ ಪಂಚಾಯಿತಿಯನ್ನು ಏಕೆ ವಿಸರ್ಜಿಸಬಾರದು ಎಂದು ಕಾರಣ ಕೇಳಿ ಸರ್ಕಾರದ ಅಧೀನ ಕಾರ್ಯದರ್ಶಿ ಪಿ.ದೇವಸಹಾಯಂ ಅವರು ನೋಟಿಸ್‌ ಜಾರಿಗೊಳಿಸಿದ್ದಾರೆ.

180 ರಡಿಯಲ್ಲಿ ನಿರೂಪಿಸಿದಂತೆ ಕನಿಷ್ಠ ಎರಡು ತಿಂಗಳಲ್ಲಿ ಒಂದು ಬಾರಿ ಸಭೆ ನಡೆಸಬೇಕಾಗಿತ್ತು. ಒಂದು ವೇಳೆ, ಅಧ್ಯಕ್ಷರು ಸಭೆ ಕರೆಯುವುದಕ್ಕೆ ತಡೆದಾಗ ಸದಸ್ಯರೆಲ್ಲರೂ ವಿಶೇಷ ಸಭೆಗಾಗಿ ಒತ್ತಾಯಿಸುವುದಕ್ಕೆ ಅವಕಾಶವಿತ್ತು. ಆದರೆ ಸದಸ್ಯರೆಲ್ಲರೂ ವಿಫಲರಾಗಿರುವುದು ಕಂಡುಬಂದಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯರೆಲ್ಲರಿಗೂ ನೀಡಿರುವ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಸ್ಥಾಯಿ ಸಮಿತಿಗಳು ಕೂಡಾ ನಿಗದಿತ ಅವಧಿಯಲ್ಲಿ ಸಭೆಗಳನ್ನು ನಡೆಸಲು ವಿಫಲವಾಗಿವೆ. ಪ್ರತಿ ತಿಂಗಳು ನಡೆಸಬೇಕಿದ್ದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿರುವುದಿಲ್ಲ. 2015–16 ಸಾಲಿನಲ್ಲಿ ಒಂದು ಬಾರಿ ಮತ್ತು 2016–17ನೇ ಸಾಲಿನಲ್ಲಿ ಒಂದು ಬಾರಿ ಮಾತ್ರ ಸಭೆ ನಡೆಸಿದ್ದು, ಇದು ಜವಾಬ್ದಾರಿ ನಿರ್ವಹಣೆಯ ವಿಫಲತೆ. ಈ ಬಗ್ಗೆ ಹೇಳಿಕೆಯೇನಾದರೂ ಇದ್ದರೆ 15 ದಿನಗಳೊಳಗೆ ಸಲ್ಲಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ADVERTISEMENT

ಸಭೆಗಳನ್ನು ನಡೆಸಲು ವಿಫಲವಾಗಿರುವ ರಾಯಚೂರು ಜಿಲ್ಲಾ ಪಂಚಾಯಿತಿಯನ್ನು ವಿಸರ್ಜನೆ ಮಾಡುವಂತೆ ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ರಜಾಕ್‌ ಉಸ್ತಾದ್‌ ಅವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.