ಸಿಂಧನೂರು: ಪತಿಯ ಕುಟುಂಬಸ್ಥರು ಮಹಿಳೆಯ ಕೊರಳಿಗೆ ನೇಣು ಬಿಗಿದು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಸಿಎಸ್ಎಫ್ ಕ್ಯಾಂಪಿನಲ್ಲಿ ನಡೆದಿದೆ.
ಮಾಬಮ್ಮ (26) ಮೃತ ಮಹಿಳೆ. ಚಿರತ್ನಾಳ ಗ್ರಾಮದ ಸಾಯಬಣ್ಣ ಅವರ ಪುತ್ರಿ ಮಾಬಮ್ಮ ಅವರನ್ನು ಸಿಎಸ್ಎಫ್ ಕ್ಯಾಂಪಿನ ಹುಸೇನಬಾಷಾ ಎನ್ನುವ ವ್ಯಕ್ತಿಯೊಂದಿಗೆ ನಾಲ್ಕು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಆ ಸಮಯದಲ್ಲಿ ತವರುಮನೆಯವರು ನಾಲ್ಕು ತೊಲ ಬಂಗಾರ ನೀಡಿದ್ದರು.
ಮದುವೆಯಾದ ಒಂದೂವರೆ ವರ್ಷ ದಂಪತಿ ಚೆನ್ನಾಗಿದ್ದರು. ಅವರಿಗೆ ಒಂದು ಮತ್ತು ಮೂರು ವರ್ಷದ ಎರಡು ಗಂಡುಮಕ್ಕಳು ಇವೆ. ನಂತರ ಪತಿ ಹುಸೇನಬಾಷಾ ‘ನನಗೆ ಮನೆ, ಹೊಲ ಇಲ್ಲ. ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸಿ ನಿತ್ಯ ಮಗಳೊಂದಿಗೆ ಜಗಳವಾಡಿ ಕಿರುಕುಳ ನೀಡುತ್ತಿದ್ದನು’ ಎಂದು ಮಾಬಮ್ಮಳ ತಂದೆ ಸಾಯಬಣ್ಣ ದೂರಿನಲ್ಲಿ ತಿಳಿಸಿದ್ದಾರೆ.
‘ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಪತಿ ಹುಸೇನಬಾಷಾ, ಮೈದುನ ಹಸೇನಬಾಷಾ, ಮಾವ ನಬೀಸಾಬ ಹಾಗೂ ಹುಸೇನಬಾಷಾನ ಸೋದರಮಾವ ಮುರ್ತುಜಾಸಾಬ ಮತ್ತಿತರರು ಸೇರಿ ಮಗಳಿಗೆ ನೇಣು ಹಾಕಿ ಕೊಲೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.