ಸಿಂಧನೂರು: ‘ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕ ಪ್ರಗತಿ ಹೊಂದುವ ಮೂಲಕ ಮಹಿಳೆಯರು ಸಬಲೀಕರಣಗೊಳ್ಳಬೇಕು’ ಎಂದು ನಗರಸಭೆ ಸಿಎಒ ದುರುಗಪ್ಪ ಹಸಮಕಲ್ ಹೇಳಿದರು.
ಸ್ಥಳೀಯ ನಗರಸಭೆ ಸಭಾಂಗಣದಲ್ಲಿ ನಲ್ಮ್ ಯೋಜನೆಯಡಿ ಸಾಮಾಜಿಕ ಮತ್ತು ಸಾಂಸ್ಥಿಕ ಅಭಿವೃದ್ಧಿ ಉಪ ಘಟಕದಡಿ ಪ್ರದೇಶ ಮಟ್ಟದ ಒಕ್ಕೂಟಗಳ ಪದಾಧಿಕಾರಿಗಳಿಗೆ ಹಾಗೂ ಸ್ವಸಹಾಯ ಸಂಘದ ಪ್ರತಿನಿಧಿಗಳಿಗೆ ಮಂಗಳವಾರ ನಡೆದ ಎರಡು ದಿನಗಳ ವಿವಿಧ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘10 ಜನ ಮಹಿಳೆಯರು ಸೇರಿ ಗುಂಪು ರಚಿಸಿಕೊಳ್ಳಬೇಕು. 10 ಮಹಿಳಾ ಗುಂಪುಗಳು ಸೇರಿ ಪ್ರದೇಶ ಮಟ್ಟದ ಒಕ್ಕೂಟ ರಚಿಸಿಕೊಳ್ಳಬಹುದು. ಉಳಿತಾಯ ಗುಂಪುಗಳ ದಾಖಲಾತಿ ನಿರ್ವಹಣೆ ಹಾಗೂ ಉಳಿತಾಯ ಚಟುವಟಿಕೆ, ಆಂತರಿಕ ಸಾಲ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ಸರ್ಕಾರದಿಂದ ಆವರ್ತ ನಿಧಿ ಸೌಲಭ್ಯ ಪಡೆದುಕೊಳ್ಳಬೇಕು. ಬ್ಯಾಂಕುಗಳ ಮೂಲಕ ವಿವಿಧ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ಸಹ ದೊರೆಯುತ್ತದೆ. ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಬಡ್ಡಿ ರಿಯಾಯಿತಿಯೂ ಲಭ್ಯವಾಗುತ್ತದೆ’ ಎಂದು ತಿಳಿಸಿದರು.
‘ಡೆ ನಲ್ಮ್ ಯೋಜನೆಯಡಿ ಸ್ವಯಂ ಉದ್ಯೋಗ ಹಾಗೂ ಗುಂಪು ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು. ಬ್ಯಾಂಕುಗಳ ಆರ್ಥಿಕ ಜೋಡಣೆ ಸೌಲಭ್ಯ, ವಿವಿಧ ಕೌಶಾಲಾಭಿವೃದ್ಧಿ ತರಬೇತಿಗಳು, ಬೀದಿಬದಿ ವ್ಯಾಪಾರಸ್ಥರಿಗೆ ಇರುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಬಹುದು’ ಎಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸುನಿತಾ ಚನ್ನಾರೆಡ್ಡಿ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಇರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಯುಎಲ್ಡಿಪಿ ಸಂಪನ್ಮೂಲ ವ್ಯಕ್ತಿ ಗಿರಿಜಾರಾಮ್, ಜಿಲ್ಲಾ ಕೌಶಾಲಾಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕ ರಸೂಲ್ ಪಿಪಿಟಿ ಮೂಲಕ ತರಬೇತಿ ನೀಡಿದರು.
ನಗರಸಭಾ ವ್ಯವಸ್ಥಾಪಕಿ ರೇಖಾ, ಸ್ಪಂದನಾ, ನಂದೀಶ್ವರ ಪ್ರದೇಶ ಮಟ್ಟದ ಒಕ್ಕೂಟದ ಪದಾಧಿಕಾರಿಗಳು ಹಾಗೂ ಎಸ್ಎಚ್ಜಿ ಗುಂಪಿನ ಪ್ರತಿನಿಧಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.