ADVERTISEMENT

ರಾಯಚೂರು: ಜಿಲ್ಲೆಯ ರಸ್ತೆಗಳಲ್ಲಿ ಮೈ ನಡುಕ!

ಹೊಂಡವಾಗಿ ಪರಿವರ್ತನೆಯಾದ ರಾಜ್ಯಹೆದ್ದಾರಿ

ನಾಗರಾಜ ಚಿನಗುಂಡಿ
Published 1 ನವೆಂಬರ್ 2020, 19:30 IST
Last Updated 1 ನವೆಂಬರ್ 2020, 19:30 IST
ರಾಯಚೂರು–ಲಿಂಗಸುಗೂರು ಮಾರ್ಗದ ರಾಜ್ಯಹೆದ್ದಾರಿ ಕಿತ್ತುಹೋಗಿದೆ
ರಾಯಚೂರು–ಲಿಂಗಸುಗೂರು ಮಾರ್ಗದ ರಾಜ್ಯಹೆದ್ದಾರಿ ಕಿತ್ತುಹೋಗಿದೆ   

ರಾಯಚೂರು: ಜಿಲ್ಲೆಯಲ್ಲಿ ಬಹುತೇಕ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು, ಜಿಲ್ಲಾ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳು ಕಳೆದ ವರ್ಷ ಮಳೆಗಾಲದಲ್ಲಿಯೇ ಹಾಳಾದರೂ ದುರಸ್ತಿಯಾಗಿರಲಿಲ್ಲ. ಈ ವರ್ಷವೂ ಅತಿಯಾದ ಮಳೆಯಿಂದಾಗಿ ರಸ್ತೆ ಗುಂಡಿಗಳು ಹೊಂಡಗಳಾಗಿ ಪರಿವರ್ತನೆಯಾಗಿವೆ.

2019ರಲ್ಲಿ ಪ್ರವಾಹ ಮತ್ತು ಭಾರಿ ಮಳೆಯಿಂದ ಹಾನಿಯಾಗಿದ್ದ ರಸ್ತೆಗಳು, ಕಿರುಸೇತುವೆಗಳ ಸಮೀಕ್ಷೆ ಕೈಗೊಂಡಿದ್ದ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದವು. 2019–20 ವರ್ಷ ಉರುಳಿದರೂ ಅನುದಾನ ಬಿಡುಗಡೆ ಆಗದೆ ಇರುವುದಕ್ಕೆ ಜಿಲ್ಲೆಯಲ್ಲಿ ಯಾವುದೇ ರಸ್ತೆಯು ದುರಸ್ತಿ ಭಾಗ್ಯ ಕಾಣಲಿಲ್ಲ. ಕೋವಿಡ್‌ ಕಾರಣದಿಂದ 2020–21ನೇ ಸಾಲಿನಲ್ಲಿಯೂ ರಸ್ತೆ ದುರಸ್ತಿಗಾಗಿ ಅನುದಾನ ಮಂಜೂರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೊಸ ಅನುದಾನವಿಲ್ಲದೆ, ಹಳೆ ಬಿಲ್‌ ಪಾವತಿಸಲು ಸಾಧ್ಯವಾಗದೆ ಲೋಕೋಪಯೋಗಿ ಇಲಾಖೆ ಬಿಕೋ ಎನ್ನುತ್ತಿದೆ.

ಎರಡು ಮಳೆಗಾಲದ ಹೊಡೆತದಿಂದ ಗ್ರಾಮೀಣ ರಸ್ತೆಗಳು ದುರಸ್ತಿಯಾಗದ ಸ್ಥಿತಿಗೆ ತಲುಪಿವೆ. ಹಳ್ಳಗಳಿಗೆ ಅಡ್ಡಲಾಗಿ ಕಟ್ಟಿದ್ದ ಕಿರುಸೇತುವೆಗಳು ಕಿತ್ತುಹೋಗಿದ್ದು, ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಕೋವಿಡ್‌ ಕಾರಣದಿಂದ ಗ್ರಾಮೀಣ ಭಾಗಗಳಿಗೆ ಇನ್ನೂ ಸರ್ಕಾರಿ ಬಸ್‌ ಸಂಚಾರ ಆರಂಭವಾಗಿಲ್ಲ. ಕೊರೊನಾ ತೊಲಗಿದರೂ, ಗ್ರಾಮೀಣ ಭಾಗಗಳಿಗೆ ವಾಹನಗಳ ಸಂಚಾರ ಸಮಸ್ಯೆ ಹಾಗೇ ಉಳಿದುಕೊಳ್ಳಲಿದೆ.

ADVERTISEMENT

ರಾಯಚೂರು–ಲಿಂಗಸುಗೂರು ಮಾರ್ಗದ ರಾಜ್ಯ ಹೆದ್ದಾರಿ ಸಂಖ್ಯೆ– 20 ಕಚ್ಚಾರಸ್ತೆಯಾಗಿ ಬದಲಾಗಿದೆ. ಕಲ್ಮಲಾ ಗ್ರಾಮದ ಬಳಿ ಹೆದ್ದಾರಿ ಕೆರೆಯಾಗಿ ಬದಲಾಗಿದೆ. ಈ ಮಾರ್ಗದಲ್ಲಿ ವಾಹನಗಳು ಪ್ರತಿ ನಿಮಿಷಕ್ಕೆ ಅರ್ಧ ಕಿಮೀ ಮಾತ್ರ ಕ್ರಮಿಸಲು ಸಾಧ್ಯವಾಗುತ್ತಿದೆ. ಸಂಪೂರ್ಣ ಹೆದ್ದಾರಿ ಕಿತ್ತುಹೋಗಿದೆ. ಹೆದ್ದಾರಿ ದುರಸ್ತಿಗಾಗಿ ವಿವಿಧ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಿವೆ. ಹೆದ್ದಾರಿಗಳ ದುರಸ್ತಿಗಾಗಿ ಉಸ್ತುವಾರಿ ಸಚಿವರು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದ್ದಾರೆ. ವಾಸ್ತವದಲ್ಲಿ ಯಾವುದೇ ಅನುದಾನವಿಲ್ಲದೆ ಕೆಲಸ ನಡೆಯುತ್ತಿಲ್ಲ.

ಗ್ರಾಮ ವಿಕಾಸ ಯೋಜನೆಯಡಿ ಪಂಚಾಯತ್‌ರಾಜ್‌ ಇಲಾಖೆಯು 2015–16ನೇ ಸಾಲಿನ ಇನ್ನೂ ಎಂಟು ರಸ್ತೆಗಳನ್ನು ಪೂರ್ಣಗೊಳಿಸಬೇಕಿದೆ. 2017–18ನೇ ಸಾಲಿನಲ್ಲಿ ಅನುಮೋದಿಸಲಾಗಿದ್ದ 29 ರಸ್ತೆ ಕಾಮಗಾರಿಗಳ ಪೈಕಿ ಮೂರು ಕಾಮಗಾರಿಗಳನ್ನು ಪ್ರಾರಂಭಿಸಬೇಕಿದೆ.

ಲೋಕೋಪಯೋಗಿ ಇಲಾಖೆಯು ಬಾಕಿ 16 ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ. ಎಸ್‌ಸಿಪಿ ಯೋಜನೆಯಡಿ 25 ರಸ್ತೆ ಕಾಮಗಾರಿಗಳು ಮತ್ತು ಟಿಎಸ್‌ಪಿ ಯೋಜನೆಯಡಿ ಇನ್ನೂ 17 ಕಾಮಗಾರಿಗಳನ್ನು ಮಾಡಬೇಕಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.