ರಾಯಚೂರು: ‘ವಿಧಾನಸಭೆಯಲ್ಲಿ ಹಿಂದೂಗಳ ಪರವಾಗಿ ಮಾತನಾಡುವವರು ಯಾರೂ ಇಲ್ಲ. ಹಿಂದೂಗಳ ಪರವಾಗಿ ಇರುವವನು ನನ್ನೊಬ್ಬನೇ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಿಂದ ಆಯೋಜಿಸಿದ್ದ ಗಣೇಶ ವಿಸರ್ಜನೆ ಹಾಗೂ ಶೋಭಾಯಾತ್ರೆಯಲ್ಲಿ ಮಂಗಳವಾರ ರಾತ್ರಿ ಪಾಲ್ಗೊಂಡು ಅವರು ಮಾತನಾಡಿದರು.
‘ರಾಜ್ಯದಲ್ಲಿ ಹಿಂದೂಗಳು ಸ್ವಾಭಿಮಾನದಿಂದ ಬದುಕು ನಡೆಸಲು ಅಗದಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸನಾತನ ಧರ್ಮದ ದಬ್ಬಾಳಿಕೆ, ದೌರ್ಜನ್ಯ ವಿರುಧ್ಧ ಹಿಂದೂ ಧರ್ಮ ಎದ್ದು ನಿಂತಿದೆ’ ಎಂದರು.
‘ ಹಿಂದೂಗಳು ವರ್ಷಕೊಮ್ಮೆ ಡಿಜೆ ಹಚ್ಚಲು ಈ ಕಾಂಗ್ರೆಸ್ ಸರ್ಕಾರ ಪರವಾನಿಗೆ ನೀಡಿಲ್ಲ. ಆದರೆ ದಿನಕ್ಕೆ ಐದು ಬಾರಿ ಚೀರುವವರಿಗೆ ಪರವಾನಿಗೆ ನೀಡುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೇಷ್ಮೆಪೇಟಾ ಹಾಕಿದರೆ ಮುನಿಸಿಕೊಳ್ಳೂತ್ತಾರೆ. ಆದರೆ, ಸಾಬರು ಟೋಪಿ ಹಾಕಿದರೆ ಖುಷಿ ಪಡುತ್ತಾರೆ’ ಎಂದು ಟೀಕಿಸಿದರು.
‘ರಾಜ್ಯದಲ್ಲಿ ಪ್ರೀತಿ ವಿಶ್ವಾಸದಿಂದ ಬದಲಾವಣೆ ಮಾಡಬೇಕಿದೆ. ಸನಾತನದ ಧರ್ಮದ ಜತೆಗೆ ಅಭಿವೃದ್ಧಿ ಬೇಕಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗಣೇಶ ಮೂರ್ತಿಯನ್ನು ಕೂಡಿಸಲು ಪರವಾನಿಗೆ ಬೇಕಿಲ್ಲ. ಒಂದು ವೇಳೆ ನಾನು ಮುಖ್ಯಮಂತ್ರಿಯಾದರೆ ಗಣೇಶ ಹಾಗೂ ನವರಾತ್ರಿ ಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಘೋಷಣೆ ಮಾಡುವೆ’ ಎಂದರು.
ಉತ್ತರ ಕರ್ನಾಟಕ ಪ್ರಾಂತ್ಯದ ಬಜರಂಗದಳದ ಮುಖಂಡ ಶಿವಾನಂದ ಸತ್ತಿಗೇಡಿ ಮಾತನಾಡಿದರು.
ಶಾಸಕ ಡಾ.ಶಿವರಾಜ ಪಾಟೀಲ, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಡಾ.ನಾಗರಾಜ ಭಾಲ್ಕಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.