ಕೂಟಗಲ್ (ರಾಮನಗರ): ಇಲ್ಲಿನ ಕಣ್ವ ಹೊಳೆ ಪ್ರದೇಶ ಹಾಗೂ ಅಕ್ಕಪಕ್ಕದ ಜಮೀನುಗಳಲ್ಲಿ ಅಕ್ರಮ ಮರಳುಗಾರಿಕೆ ಅವ್ಯಹತವಾಗಿ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಣ್ವ ಹೊಳೆಗೆ ಹರಿಯುವ ಹಳ್ಳ–ಕೊಳ್ಳಗಳಲ್ಲಿನ ಮಣ್ಣನ್ನು ಬಗೆದು ತುಂಬಿಕೊಳ್ಳಲಾಗುತ್ತಿದೆ. ಇದಲ್ಲದೆ ಸುತ್ತಲಿನ ಜಮೀನುಗಳನ್ನು ಗುತ್ತಿಗೆಗೆ ಪಡೆದು ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ರಾತ್ರಿ ವೇಳೆಯಲ್ಲಿ ಜೆಸಿಬಿ ಯಂತ್ರಗಳ ಮೂಲಕ ಮರಳನ್ನು ತೋಡಿ ಟ್ರ್ಯಾಕ್ಟರ್ಗಳ ಮೂಲಕ ಸಾಗಿಸಲಾಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.
ಹೋಬಳಿಯ ಚಿಕ್ಕಗಂಗವಾಡಿ, ಹೊಂಬೇಗೌಡನ ದೊಡ್ಡಿ ಮೊದಲಾದ ಗ್ರಾಮಗಳ ಜಮೀನುಗಳ ದಿಬ್ಬಗಳಲ್ಲಿ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆದಿದೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾಗ್ಯೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸುತ್ತಾರೆ.
ರಾತ್ರಿ ಹೊತ್ತು ಮರಳು ಹೊತ್ತ ಟ್ರ್ಯಾಕ್ಟರ್ಗಳ ಓಡಾಟ ವಿಪರೀತವಾಗಿದೆ. ಇದರಿಂದ ಇಲ್ಲಿನ ಭೂಸಂಪತ್ತು ಲೂಟಿಯಾಗುತ್ತಿದೆ. ಭಾರಿ ವಾಹನಗಳ ಓಡಾಟದಿಂದ ರಸ್ತೆಗಳು ಹಾಳಾಗುತ್ತಿವೆ. ಇನ್ನಾದರೂ ತಾಲ್ಲೂಕು ಆಡಳಿತ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.