ADVERTISEMENT

ಅರ್ಕಾವತಿ ನದಿಗೆ ಕಲುಷಿತ ನೀರು

ನಗರಸಭೆ ಎದುರು ವಾರ್ಡ್‌ ನಿವಾಸಿಗಳ ಪ್ರತಿಭಟನೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 11:37 IST
Last Updated 5 ಏಪ್ರಿಲ್ 2018, 11:37 IST

ರಾಮನಗರ: ಒಂದರಿಂದ ಹತ್ತನೇ ವಾರ್ಡ್‌ಗೆ ನೀರು ಸರಬರಾಜು ಮಾಡುವ ಇಲ್ಲಿನ ದ್ಯಾವರಸೇಗೌಡನದೊಡ್ಡಿ ಪಂಪ್‌ ಹೌಸ್‌ ಬಳಿ ಕಲುಷಿತ ನೀರಿನ ಗುಂಡಿ ನಿರ್ಮಾಣ ಆಗಿದೆ. ಇಲ್ಲಿ ಶೇಖರಣೆ ಆಗುವ ಕಲುಷಿತ ನೀರು ಮತ್ತೆ ಅರ್ಕಾವತಿ ನದಿ ಸೇರುತ್ತಿದೆ.ದ್ಯಾವರಸೇಗೌಡನದೊಡ್ಡಿ, ಅಂಚೆ ಕೆಂಪಯ್ಯನದೊಡ್ಡಿ,ಚಾಮುಂಡಿಪುರ ಹಾಗೂ ಸಿಂಗ್ರಾಭೋವಿದೊಡ್ಡಿಯ ಮನೆಗಳಿಂದ ಚರಂಡಿ ಮೂಲಕವಾಗಿ ಬರುವ ಕಲುಷಿತ ನೀರು ನದಿ ಸೇರುತ್ತಿದೆ. ಈ ವಿಚಾರವಾಗಿ ನಗರಸಭೆ ಸದಸ್ಯ ಡಿ.ಕೆ.ಶಿವಕುಮಾರ್ ಕಳೆದ ಮೂರು ಸಾಮಾನ್ಯ ಸಭೆಗಳಲ್ಲಿ ಗಂಭೀರವಾಗಿ ವಿಷಯ ಪ್ರಸ್ತಾಪ ಮಾಡಿದ್ದರೂ ಸಮಸ್ಯೆಯಾಗಿಯೇ ಉಳಿದಿದೆ.ಆದರೆ, ಈ ನೀರು ಪಂಪ್‍ ಹೌಸ್‌ ಬಳಿಯ ಕೆಳ ಭಾಗಕ್ಕೆ ಹರಿದು ಹೋಗಲು ಹಾಲಿ ಇರುವ ಕಾಲುವೆಯಲ್ಲಿ ನೀರು ಹರಿದರೆ ತೊಂದರೆ ಆಗುವುದಿಲ್ಲ. ಇದನ್ನು ತಾತ್ಕಾಲಿಕವಾಗಿ ನಗರಸಭೆ ಕಳೆದ ಮೂರು ದಿನಗಳ ಹಿಂದೆ ಪಂಪ್‍ ಹೌಸ್‌ ಮುಂಭಾಗವೇ ಗುಂಡಿ ನಿರ್ಮಾಣ ಮಾಡಿದ್ದು, ಈಗ ಗುಂಡಿ ತುಂಬಿ ಆ ನೀರು ಸರಬರಾಜು ಮಾಡುವ ಗುಂಡಿಗೆ ಹೋಗುವ ಸಾಧ್ಯತೆ ಎಂದು ಇಲ್ಲಿನ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಇಲ್ಲಿಂದ ಒಂದರಿಂದ 10ನೇ ವಾರ್ಡ್‌ಗೆ ಪೂರೈಕೆ ಆಗುತ್ತಿರುವ ನೀರಿನಿಂದಾಗಿ ಚರ್ಮ ರೋಗ ಈಗಾಗಲೇ ಕಾಣಿಸಿಕೊಂಡಿದೆ. ಕಲುಷಿತ ನೀರನ್ನು ಪರ್ಯಾಯವಾಗಿ ಅರ್ಕಾವತಿಗೆ ಮಿಶ್ರಣ ಆಗದಂತೆ, ಗುಂಡಿ ತೊಡಿ ಶೇಖರಣೆ ಮಾಡುವ ಜನರ ಕಣ್ಣೊರೆಸುವ ತಾತ್ಕಾಲಿಕ ಕ್ರಮ ಕೈಬಿಟ್ಟು ಹಳ್ಳಿಮಾಳ ರಸ್ತೆಯ ಅರ್ಕಾವತಿ ಸೇತುವೆ ಬಳಿ ಪಂಪ್‍ ಹೌಸ್‌ ನಿರ್ಮಾಣ ಮಾಡಬೇಕು. ಶಾಶ್ವತ ಪರಿಹಾರ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಈಗ ಪೂರೈಸುತ್ತಿರುವ ನೀರು ಸಹ ವ್ಯವಸ್ಥಿತವಾಗಿ ಶುದ್ಧೀಕರಿಸಲಾಗುತ್ತಿಲ್ಲ. ಪ್ರತಿನಿತ್ಯ ಬೆಳಿಗ್ಗೆ ಸಂಜೆ 50ಕೆ.ಜಿ. ಬ್ಲಿಚಿಂಗ್ ಪೌಡರ್ ಹಾಕುತ್ತಿರುವುದರಿಂದ ನೀರಿನ ಶುದ್ಧೀಕರಣ ಸಹ ಸಮರ್ಪಕವಾಗಿಲ್ಲ ಎಂದು ಒಂದನೇ ವಾರ್ಡಿನ ಮುಖಂಡರಾದ ದೊಡ್ಡಿಉಮೇಶ್, ರಾಜಣ್ಣ, ದೊಡ್ಡಯ್ಯ, ಉಮೇಶ್ ತಿಳಿಸಿದರು.

ನಗರಸಭೆ ಅಧ್ಯಕ್ಷರು, ಆಯುಕ್ತರು ಹಾಗೂ ಅಧಿಕಾರಿ ವರ್ಗ ಈ ಸಮಸ್ಯೆಯನ್ನು ಗಂಭೀರವಾಗಿ ಚರ್ಚಿಸಿ ಒಂದು ವಾರದೊಳಗೆ ಬಗೆಹರಿಸದಿದ್ದರೆ ನಗರ
ಸಭೆ ಮುಂಭಾಗ ಗ್ರಾಮಸ್ಥರು, ವಾರ್ಡ್‌ನ ಜನರು ಪ್ರತಿಭಟನೆ ಹಮ್ಮಿಕೊಳ್ಳವುದಾಗಿ ಎಚ್ಚರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.