ADVERTISEMENT

ಏಳನೇ ಬಾರಿ ಶಾಸಕರಾದ ಡಿ.ಕೆ.ಶಿವಕುಮಾರ್‌

ಕನಕಪುರ ಕ್ಷೇತ್ರದಲ್ಲಿ ದಾಖಲೆಯ ಅಂತರದ ಜಯ

​ಪ್ರಜಾವಾಣಿ ವಾರ್ತೆ
Published 16 ಮೇ 2018, 9:48 IST
Last Updated 16 ಮೇ 2018, 9:48 IST
ಏಳನೇ ಬಾರಿ ಶಾಸಕರಾದ ಡಿ.ಕೆ.ಶಿವಕುಮಾರ್‌
ಏಳನೇ ಬಾರಿ ಶಾಸಕರಾದ ಡಿ.ಕೆ.ಶಿವಕುಮಾರ್‌   

ರಾಮನಗರ: ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್‌ ಪುನರಾಯ್ಕೆ ಆಗಿದ್ದಾರೆ. ಆದರೆ ಹಿಂದೆಂದಿಗಿಂತ ಹೆಚ್ಚು ಮತಗಳ ಅಂತರದಲ್ಲಿ ಜಯ ಗಳಿಸಿರುವುದು ಅವರ ಹಿರಿಮೆ.

ಈ ಬಾರಿಯ ಚುನಾವಣೆಯಲ್ಲಿ ಶಿವಕುಮಾರ್ ಬರೋಬ್ಬರಿ 79,909 ಮತಗಳ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಹೆಚ್ಚು ಪೈಪೋಟಿಯೇ ಇಲ್ಲದಂತೆ ಅನಾಯಾಸವಾಗಿ ಗೆದ್ದು ಬಂದಿದ್ದಾರೆ. ಇದು ಕ್ಷೇತ್ರದಲ್ಲಿ ಅವರು ಹೊಂದಿರುವ ಹಿಡಿತವನ್ನು ವಿವರಿಸಿ ಹೇಳುವಂತಿದೆ.

ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕಲು ಜೆಡಿಎಸ್ ಹಾಗೂ ಬಿಜೆಪಿ ಮೀನಮೇಷ ಎಣಿಸಿದ್ದು ಅವರ ಗೆಲುವಿನ ಅಂತರ ಹೆಚ್ಚಳಕ್ಕೆ ಕಾರಣವಾಗಿದೆ. ನಾಮಪತ್ರ ಸಲ್ಲಿಕೆಯ ಕಡೆಯ ದಿನಗಳಲ್ಲಿ ಜೆಡಿಎಸ್ ನಾರಾಯಣ ಗೌಡರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತು. ಬಿಜೆಪಿ ನಂದಿನಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿತು. ಆದರೆ ಈ ಎರಡೂ ಪಕ್ಷಗಳ ಅಭ್ಯರ್ಥಿಗಳ ಪರ ಹೆಚ್ಚು ಪ್ರಚಾರ ನಡೆಯಲಿಲ್ಲ.

ADVERTISEMENT

ಹಲವು ಕೊರತೆಗಳ ನಡುವೆಯೂ ನಾರಾಯಣ ಗೌಡರು ಗಣನೀಯ ಸಂಖ್ಯೆಯಲ್ಲಿ ಮತ ಗಳಿಸಿದ್ದಾರೆ. ಇದು ಕ್ಷೇತ್ರದಲ್ಲಿ ಇನ್ನೂ ಜೆಡಿಎಸ್ ಪರ ಒಲವು ಇರುವುದನ್ನು ಹೇಳುವಂತಿದೆ. ಆದರೆ ಬಿಜೆಪಿ ಇಲ್ಲಿ ಹೆಚ್ಚಿಗೆ ಸಾಧನೆ ಮಾಡಲು ಆಗಿಲ್ಲ.

ನಾಮಪತ್ರ ಸಲ್ಲಿಕೆಯ ಆರಂಭದ ಒಂದು ದಿನ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದ ಶಿವಕುಮಾರ್ ನಂತರದಲ್ಲಿ ಮತದಾನದ ಮುನ್ನ ಕಡೆಯ ಎರಡು ದಿನದಂದು ಮತಯಾಚನೆ ಮಾಡಿದ್ದರು. ಅವರ ಪತ್ನಿ ಉಷಾ ಈ ಬಾರಿ ನಗರದಲ್ಲಿ ಸಕ್ರಿಯವಾಗಿ ಪತಿ ಪರ ಪ್ರಚಾರ ಮಾಡಿದ್ದರು.

ಏಳನೇ ಬಾರಿ: ಶಿವಕುಮಾರ್‌ಗೆ ಇದು ಒಟ್ಟು ಎಂಟನೇ ವಿಧಾನಸಭೆ ಚುನಾವಣೆ. ಏಳನೇ ಗೆಲುವು. 1985ರಲ್ಲಿ ಸಾತನೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದ ಅವರು 1989ರಿಂದ 2004ರವರೆಗೆ ಸಾತನೂರು ಕ್ಷೇತ್ರವನ್ನು ಹಾಗೂ 2008ರಿಂದ ಕನಕಪುರ ಕ್ಷೇತ್ರವನ್ನು ಶಾಸಕರಾಗಿ ಪ್ರತಿನಿಧಿಸುತ್ತಾ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.