
ಚನ್ನಪಟ್ಟಣ: ಬೆಳೆ ಕಟಾವಿಗೆ ಅವಕಾಶ ನೀಡಿಲ್ಲ ಎಂದು ಮಂಗವಾರಪೇಟೆಯ ರೈತ ವಿಶ್ವನಾಥ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಗೆ ಸ್ಥಳೀಯ ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಕಾರಣ ಎಂದು ರಾಜ್ಯ ರೈತ ಸಂಘದ ನಾಯಕಿ ಅರಳಾಳುಸಂದ್ರದ ಅನಸೂಯಮ್ಮ ಆರೋಪಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭತ್ತ ಕಟಾವಿಗೆ ರಕ್ಷಣೆ ಕೊಡುವುದಾಗಿ ಭರವಸೆ ನೀಡಿದ್ದ ಪೊಲೀಸರು ನಂತರ ನಿಲುವು ಬದಲಿಸಿ ಕಟಾವು ತಡೆದರು. ರಕ್ಷಣೆ ಕೊಡಲು ಬಂದವರು ಯಾಕೆ ಬದಲಾದರು ಎಂದು ಬಹಿರಂಗವಾಗಬೇಕು ಎಂದು ಒತ್ತಾಯಿಸಿದರು.
ಪೊಲೀಸರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತನೊಬ್ಬ ಆತ್ಮಹತ್ಯೆಗೆ ಯತ್ನ ನಡೆಸಿರುವುದು ಆತಂಕದ ವಿಚಾರ ಎಂದು ರೈತ ಸಂಘದ ಕೆ.ಎನ್. ರಾಜು ಹೇಳಿದರು.
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವಿಶ್ವನಾಥ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ವಿಷ ಸೇವಿಸಿದ ನಂತರ ಪೊಲೀಸರು ತಮ್ಮ ಜೀಪಿನಲ್ಲೇ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ನಂತ ಹೆಚ್ಚಿನ ಚಿಕಿತ್ಸೆಗೆ ಮಂಡ್ಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಮೈಸೂರಿಗೆ ಕಳುಹಿಸಿ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದು ಹೇಳಿದರು.
ರೈತ ಸಂಘದ ಜಗದಾಪುರ ರಾಮೇಗೌಡ, ವಿರುಪಾಕ್ಷಿಪುರ ರಮೇಶ್, ಕೃಷ್ಣ, ನರಸನಕಟ್ಟೆ ರೈತರು, ರೈತ ಮಹಿಳೆಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.