ರಾಮನಗರ: ಜಿಲ್ಲಾ ಪಂಚಾಯಿತಿಗೆ ಅಧ್ಯಕ್ಷರಾಗಿ ಎಚ್.ಸಿ.ರಾಜಣ್ಣ ಮುಂದುವರೆಯುತ್ತಾರಾ ? ಅವರು ನೀಡಿರುವ ರಾಜೀನಾಮೆ ಅಂಗೀಕಾರವಾಗುತ್ತಾ ? ರಾಜೀನಾಮೆ ವಾಪಸು ಪಡೆಯುತ್ತಾರಾ ? ಉಪಾಧ್ಯಕ್ಷೆ ಗೌರಮ್ಮ ಅವರಿಗೆ ಪ್ರಭಾರ ಅಧ್ಯಕ್ಷರಾಗುವ ಭಾಗ್ಯ ಸಿಗುತ್ತಾ? ಆಡಳಿತಾಧಿಕಾರಿ ನೇಮಕ ಆಗುತ್ತಾರಾ? ಸದಸ್ಯೆ ಸುಧಾರಾಜು ಅವರಿಗೆ ಈ ಅವಧಿಯಲ್ಲಿ ಅಧ್ಯಕ್ಷೆಯಾಗುವ ಅವಕಾಶ ದೊರೆಯುತ್ತಾ ? ಜೆಡಿಎಸ್ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ?...
ಇವೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳಿಗೆ ಶುಕ್ರವಾರ ಉತ್ತರ ದೊರೆಯಲಿದೆ.
ಜಿ.ಪಂ ಅಧ್ಯಕ್ಷ ರಾಜಣ್ಣ ಅವರು ಎರಡನೇ ಬಾರಿಗೆ (ಫೆ.21ರಂದು) ಸಲ್ಲಿಸಿದ ರಾಜೀನಾಮೆಗೆ ಶುಕ್ರವಾರ 15 ದಿನ ಪೂರೈಸಲಿದೆ. ರಾಜಣ್ಣ ಅವರು ಶುಕ್ರವಾರ ಸಂಜೆಯೊಳಗೆ ರಾಜೀನಾಮೆ ಪತ್ರ ವಾಪಸು ಪಡೆಯದಿದ್ದರೆ, ಮರು ದಿನವೇ ರಾಜೀನಾಮೆಯನ್ನು ಅಂಗೀಕರಿಸುವ ಅಧಿಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (ಆರ್ಡಿಪಿಆರ್) ಪ್ರಧಾನ ಕಾರ್ಯದರ್ಶಿ ಅವರಿಗಿದೆ.
ಒಂದು ವೇಳೆ ರಾಜಣ್ಣ ರಾಜೀನಾಮೆ ಹಿಂಪಡೆದರೆ ಜೂನ್ 16ರವರೆಗೆ ಅಧ್ಯಕ್ಷರಾಗಿ ಮುಂದುವರೆಯುವ ಅವಕಾಶ ದೊರೆಯುವ ಸಾಧ್ಯತೆ ಇದೆ. ರಾಜೀನಾಮೆ ಹಿಂಪಡೆಯದಿದ್ದರೆ ಆರ್ಡಿಪಿಆರ್ ಇಲಾಖೆಯು ಉಪಾಧ್ಯಕ್ಷರನ್ನು ಪ್ರಭಾರ ಅಧ್ಯಕ್ಷರನ್ನಾಗಿ ನೇಮಿಸುವಂತೆ ಆದೇಶಿಸಬಹುದು. ನೀತಿ ಸಂಹಿತೆ ಇರುವ ಕಾರಣ ಅಧ್ಯಕ್ಷ ಚುನಾವಣೆ ನಡೆಸುವ ಸಾಧ್ಯತೆ ಬಹುತೇಕ ಕಡಿಮೆ.
ಚುನಾವಣೇ ಮಾಡಲೇಬೇಕು ಎಂದರೆ ಅದಕ್ಕೆ ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಎರಡನೇ ಅವಧಿಯ ಅಧ್ಯಕ್ಷ ಸ್ಥಾನದ ಅವಧಿ ಜೂನ್ 16ಕ್ಕೆ ಕೊನೆಗೊಳ್ಳಲಿರುವ ಕಾರಣ ಅಲ್ಪಾವಧಿಗೆ ಚುನಾವಣೆ ನಡೆಸಲು ಆಯೋಗ ಅನುಮತಿ ನೀಡುವ ಸಾಧ್ಯತೆ ಕಡಿಮೆ ಎಂದು ಆರ್ಡಿಪಿಆರ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಆರ್ಡಿಪಿಆರ್ ಇಲಾಖೆಯು ಆಡಳಿತಾಧಿಕಾರಿಯನ್ನೂ ನೇಮಿಸಲು ಪಂಚಾಯತ್ ರಾಜ್ ಕಾನೂನಿನಲ್ಲಿ ಅವಕಾಶವಿದೆ. ಅದರಂತೆ ಪ್ರಾದೇಶಿಕ ಆಯುಕ್ತರು ಅಥವಾ ಜಿಲ್ಲಾಧಿಕಾರಿ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಬಹುದು. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಅಧಿಕಾರಿಗಳಿಗೆ ಕಾರ್ಯ ಒತ್ತಡ ಹೆಚ್ಚಿರುವ ಕಾರಣ, ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ವೇಳೆ ಚುನಾವಣಾ ಆಯೋಗದಿಂದ ಅನುಮತಿ ಪಡೆದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಎದುರಾದರೆ, ಸದಸ್ಯೆ ಸುಧಾರಾಜು ಅವರು ಉಳಿದ ಅವಧಿಗೆ ಅಧ್ಯಕ್ಷರಾಗಲೂ ಬಹುದು. ಆದರೆ ಇದಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರಯತ್ನ ನಡೆಯಬೇಕು ಎನ್ನುತ್ತಾರೆ ಅಧಿಕಾರಿಗಳು.
ಹೆಸರಿಗಷ್ಟೇ ಅಧ್ಯಕ್ಷರು: ಹಾಲಿ ಅಧ್ಯಕ್ಷ ರಾಜಣ್ಣ ಅಧ್ಯಕ್ಷರಾಗಿ ಮುಂದುವರೆದರೂ, ಉಪಾಧ್ಯಕ್ಷೆ ಗೌರಮ್ಮ ಪ್ರಭಾರ ಅಧ್ಯಕ್ಷರಾದರೂ, ಸದಸ್ಯೆ ಸುಧಾರಾಜು ಅಧ್ಯಕ್ಷರಾದರೂ ಚುನಾವಣಾ ನೀತಿ ಸಂಹಿತೆ ಮೇ 28ರವರೆಗೆ ಇರುವ ಕಾರಣ ಅವರ ಅಧಿಕಾರ ಕಾರ್ಯ ಸೀಮಿತವಾಗಿರುತ್ತದೆ. ಅಲ್ಲಿಯವರೆಗೂ ಅವರು ಹೆಸರಿಗೆ ಮಾತ್ರ ಅಧ್ಯಕ್ಷರಾಗಿರುತ್ತಾರೆ. ಅಧ್ಯಕ್ಷ ಸ್ಥಾನದ ನೈಜ ಅಧಿಕಾರ ಚಲಾವಣೆ ಅವರಿಂದ ಸಾಧ್ಯವಾಗುವುದಿಲ್ಲ ಎಂದು ಅವರು ಹೇಳುತ್ತಾರೆ.
ಮೇ 28ರವರೆಗೂ ಅಧ್ಯಕ್ಷರು ಜಿ.ಪಂ ನ ಯಾವುದೇ ಸಭೆ ನಡೆಸಲು ಆಗುವುದಿಲ್ಲ. ಸಮಾರಂಭಗಳಲ್ಲಿ ಹಾಜರಾಗುವಂತಿಲ್ಲ. ಕಡತಗಳಿಗೆ ಸಹಿ ಹಾಕುವಂತಿಲ್ಲ. ಅಧ್ಯಕ್ಷರಿಗೆ ಈ ಅವಧಿಯಲ್ಲಿ ಕಾರು ಸೇರಿದಂತೆ ಇತರ ಸವಲತ್ತುಗಳು ದೊರೆಯುವುದಿಲ್ಲ. ಹಾಗಾಗಿ ಯಾರೇ ಅಧ್ಯಕ್ಷರಾದರೂ ಹೆಸರಿಗಷ್ಟೇ ಅಧ್ಯಕ್ಷರಾಗಿರುತ್ತಾರೆ ಎಂದು ಅವರು ವಿವರಿಸುತ್ತಾರೆ.
ರಾಜಣ್ಣ ಪ್ರತಿಕ್ರಿಯೆ: ‘ಪಕ್ಷದ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ರಾಜೀನಾಮೆ ಪತ್ರ ಅಂಗೀಕಾರಕ್ಕೆ ಶುಕ್ರವಾರದವರೆಗೆ ಸಮಯ ಇದ್ದು, ವರಿಷ್ಠರು ಹೇಳಿದಂತೆ ಮಾಡುತ್ತೇನೆ’ ಎಂದು ಜಿ.ಪಂ ಅಧ್ಯಕ್ಷ ಎಚ್.ಸಿ.ರಾಜಣ್ಣ ಪ್ರತಿಕ್ರಿಯಿಸಿದರು.
‘ಜಿ.ಪಂ ಅಧ್ಯಕ್ಷ ಸ್ಥಾನದ ಕುರಿತು ಇನ್ನೂ ಯಾವ ನಿರ್ಧಾರವನ್ನು ಕೈಗೊಂಡಿಲ್ಲ. ಮುಖಂಡರ ಜತೆ ಚರ್ಚಿಸಿ ಶೀಘ್ರದಲ್ಲಿಯೇ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.