ಚನ್ನಪಟ್ಟಣ: ಸಾಮಾಜಿಕ ಪಿಡುಗುಗಳಾದ ಅನಕ್ಷರತೆ, ಅನಾರೋಗ್ಯ, ಭ್ರೂಣಹತ್ಯೆ ಮೊದಲಾದವುಗಳ ಬಗ್ಗೆ ಯುವಜನರು ಗ್ರಾಮೀಣರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಪ್ರೊ. ಚಂದ್ರಯ್ಯ ತಿಳಿಸಿದರು.
ತಾಲ್ಲೂಕಿನ ತೊರೆಹೊಸೂರು ಗ್ರಾಮದಲ್ಲಿ ಕುವೆಂಪು ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ಎನ್ಎಸ್ಎಸ್ ಶಿಬಿರದ ಉಪನ್ಯಾಸ ಹಾಗೂ ಸಾಂಸ್ಕತಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ನಗರ ಮತ್ತು ಗ್ರಾಮೀಣರ ನಡುವೆ ಸಮನ್ವಯ ಏರ್ಪಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಸಾಹಿತಿ ವಿಜಯ್ ರಾಂಪುರ, ‘ಯುವಜನತೆಯ ಮೇಲಿರುವ ಸವಾಲುಗಳು’ ಕುರಿತು ಉಪನ್ಯಾಸ ನೀಡಿದರು. ‘ಯುವಶಕ್ತಿಯೇ ಈ ದೇಶದ ಅಮೂಲ್ಯ ಆಸ್ತಿ. ಅವರ ಮೇಲೆ ನೂರಾರು ಸವಾಲುಗಳಿವೆ. ವಿದ್ಯಾವಂತರು ಹಳ್ಳಿಗಳನ್ನು ತೊರೆದು ಪಟ್ಟಣ ಸೇರುತ್ತಿರುವುದು ನೋವಿನ ಸಂಗತಿ. ದೇಶದ ಜ್ವಲಂತ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳ ಸಮೂಹ ಒಗ್ಗಟ್ಟಾಗಿ ಉತ್ತರ ಕಂಡುಕೊಳ್ಳಬೇಕಿದೆ’ ಎಂದರು.
ಶಿಬಿರಾಧಿಕಾರಿ ಪ್ರೊ. ಎನ್.ಎಸ್. ಪುಟ್ಟಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜನಪದ ಗಾಯಕ ಚೌ.ಪು.ಸ್ವಾಮಿ, ಸಹಶಿಬಿರಾಧಿಕಾರಿ ಡಾ. ಹೆಚ್.ಎಲ್. ರವೀಂದ್ರ, ಶಿಕ್ಷಕ ಟಿ. ರಂಗಸ್ವಾಮಿ, ಉಪನ್ಯಾಸಕರಾದ ಎಂ.ಇ. ಚಂದ್ರು, ಬಿ.ಎನ್.ಮಹೇಶ್, ಎಸ್. ವಿನಯ್ಕುಮಾರ್ ಇದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.