ಕನಕಪುರ: ಅರಣ್ಯ ಭೂಮಿಯನ್ನು ಕೆಲವರು ಒತ್ತುವರಿ ಮಾಡಿ ಮಣ್ಣು ತೆಗೆಯುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಆರೋಪಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಅಂದಾನಿಗೌಡ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಅಚ್ಚಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಮಿ ಸಮತಟ್ಟು ಮಾಡುವ ನೆಪದಲ್ಲಿ ಕೆಲವರು ಅರಣ್ಯ ಜಾಗವನ್ನು ಒತ್ತುವರಿ ಮಾಡಿ ಅಲ್ಲಿಂದ ಮಣ್ಣು ತೆಗೆಯುತ್ತಿದ್ದಾರೆ. ಒತ್ತುವರಿ ತೆರವಿಗೆ ಸಂಬಂಧಪಟ್ಟವರು ಕ್ರಮ ವಹಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ರೆಸಾರ್ಟ್ ಮಾಲೀಕರು ತೆರಿಗೆ ಸರಿಯಾಗಿ ಪಾವತಿ ಮಾಡುತ್ತಿಲ್ಲ. ನಿಯಮಾನುಸಾರ ತೆರಿಗೆ ವಸೂಲಿ ಮಾಡಬೇಕು ಎಂದರು.
ಸದಸ್ಯ ಕುಮಾರಸ್ವಾಮಿ ಮಾತನಾಡಿ, ಹೊಂಗಾಣಿದೊಡ್ಡಿ ಗ್ರಾಮದಲ್ಲಿ ನಂಜೇಶ್ ಕೊಲೆ ಬಳಿಕ ಕೊಲೆ ಆರೋಪಿಗಳ ಕುಟುಂಬದ ಸದಸ್ಯರು ಗ್ರಾಮ ತೊರೆದಿದ್ದಾರೆ. ಗ್ರಾಮದಲ್ಲಿ ಅವರಿಗೆ ರಕ್ಷಣೆ ಇಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಗ್ರಾಮ ತೊರೆದಿರುವ ಕುಟುಂಬಗಳಿಗೆ ರಕ್ಷಣೆ ಕೊಟ್ಟು ಅವರು ಗ್ರಾಮದಲ್ಲೇ ವಾಸ ಮಾಡುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಒತ್ತಾಯಿದರು.
ಅಧ್ಯಕ್ಷ ಅಂದಾನಿಗೌಡ ಮಾತನಾಡಿ, ಹೊಂಗಾಣಿದೊಡ್ಡಿ ಗ್ರಾಮದಲ್ಲಿ ನಡೆದ ಕೊಲೆ ಸಂಬಂಧ ಆರೋಪಿಗಳ ಕುಟುಂಬದವರು ಗ್ರಾಮ ತೊರೆದಿರುವ ಬಗ್ಗೆ ರಕ್ಷಣೆ ಕೊಡಿ ಎಂದು ಯಾರೂ ಕೇಳಿಲ್ಲ. ಯಾರು ದೂರು ಕೊಟ್ಟಿಲ್ಲ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಪಿಡಿಒ ಕೃಷ್ಣ ಮಾತನಾಡಿ, ಈ ಸ್ವತ್ತು ಜನರೇಟರ್ ಲಾಕ್ ಮಾಡಿದ್ದು ಹೊಸ ಸಾಫ್ಟ್ವೇರ್ ಅಪ್ಡೇಟ್ ಆಗಿದೆ. ಹೊಸ ನಿಯಮದಂತೆ ಈ ಸ್ವತ್ತು ಮಾಡಬೇಕು. ಮನೆ ಮನೆ ಕಸ ಸಂಗ್ರಹ ಮಾಡಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಆದೇಶದಂತೆ ತಾತ್ಕಾಲಿಕ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಶೋಭಾ ಗೋವಿಂದೇಗೌಡ, ಸದಸ್ಯರಾದ ಸತೀಶ್, ಬಸವರಾಜು, ಸುರೇಶ್, ಶಿವಮ್ಮ, ಶಶಿಕಲಾ, ಸಾವಿತ್ರಮ್ಮ, ಗೌರಮ್ಮ, ಸವಿತಾ, ವರಲಕ್ಷ್ಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.