ADVERTISEMENT

‘ಸಿಎಂ ಸಾವಿನ ಭಾಗ್ಯ ನೀಡದಿರಲಿ’

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 9:34 IST
Last Updated 2 ಅಕ್ಟೋಬರ್ 2017, 9:34 IST
ಕೂಟಗಲ್‌ ಹೋಬಳಿಯ ಯರೆಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ನಡೆದ ಕೂಟಗಲ್‌ ಹೋಬಳಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಎಚ್.ಡಿ. ದೇವೆಗೌಡ ಮಾತನಾಡಿದರು.
ಕೂಟಗಲ್‌ ಹೋಬಳಿಯ ಯರೆಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ನಡೆದ ಕೂಟಗಲ್‌ ಹೋಬಳಿ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಎಚ್.ಡಿ. ದೇವೆಗೌಡ ಮಾತನಾಡಿದರು.   

ಕೂಟಗಲ್‌ (ರಾಮನಗರ ): ಪ್ರಧಾನಿ ನರೇಂದ್ರಮೋದಿ ಅವರದ್ದು ‘ಮನ್‌ ಕಿ ಬಾತ್‌’. ಅವರಂತೆ ನನಗೆ ಮಾತಿನಲ್ಲಿ ಗೋಪುರ ಕಟ್ಟಲು ಬರುವುದಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರದ್ದು ‘ಕಾಮ್‌ ಕಿ ಬಾತ್‌’. ಹಲವು ಭಾಗ್ಯಗ ಳನ್ನು ಕೊಡುತ್ತಿರುವ ಮುಖ್ಯಮಂತ್ರಿ ಜನರಿಗೆ ‘ಸಾವಿನ ಭಾಗ್ಯ’ ಕೊಡುವುದು ಬೇಡ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಲೇವಡಿ ಮಾಡಿದರು.

ಇಲ್ಲಿನ ಯರೆಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಭಾನು ವಾರ ನಡೆದ ಕೂಟಗಲ್‌ ಹೋಬಳಿ ಜೆಡಿಎಸ್ ಪಕ್ಷದ ಕಾರ್ಯ ಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾವೇರಿ ನದಿ ನೀರಿನ ವ್ಯಾಜ್ಯ ಕುರಿತಂತೆ ಸುಪ್ರೀಂ ಕೋರ್ಟ್ ನೀಡಲಿರು ವ ಅಂತಿಮ ತೀರ್ಪಿನಿಂದ ಎದುರಾಗುವ ಅನಾಹುತಗಳ ಸೂಕ್ಷ್ಮತೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಇದ್ದಂತಿಲ್ಲ. ನಾಲ್ಕು ರಾಜ್ಯಗಳ ನಡುವಿನ ಸುಮಾರು 200 ವರ್ಷಗಳ ಕಾವೇರಿ ನದಿ ನೀರಿನ ವ್ಯಾಜ್ಯ ಎರಡು ತಿಂಗಳಲ್ಲಿ ಮುಗಿಯಲಿದೆ. ಆದರೆ, ರಾಜ್ಯ ಸರ್ಕಾರ ಕಾವೇರಿ ವಿವಾದವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ ಎಂದರು.

ADVERTISEMENT

‘ಕಾವೇರಿ ನದಿ ನೀರಿನ ವಿಚಾರದಲ್ಲಿ ಸುಪ್ರೀಂ ಕೋರ್ಟಿನಿಂದ ರಾಜ್ಯಕ್ಕೆ ಮಾರಕವಾಗುವ ಅಂತಿಮ ತೀರ್ಪು ಹೊರ ಬೀಳುವ ಆತಂಕ ಕಾಡುತ್ತಿದೆ. ಇದರಿಂದ ಎದುರಾಗುವ ಅನಾಹುತಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಆದರೆ, ನನ್ನಲ್ಲಿರುವ ಸೂಕ್ಷ್ಮತೆ ರಾಜ್ಯ ಸರ್ಕಾರಕ್ಕಿಲ್ಲ’ ಎಂದರು.

ಹಾಗೊಂದು ವೇಳೆ ನ್ಯಾಯಾಲಯ ಕಾವೇರಿ ನೀರು ಹಂಚಿಕೆ ನಿರ್ವಹಣಾ ಮಂಡಳಿ ರಚನೆಗೆ ಆದೇಶಿಸಿದರೆ ಕಾವೇರಿ ಅಚ್ಚುಕಟ್ಟು ಪ್ರದೇಶಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದರು.

‘ಈಗ ಇಗ್ಗಲೂರು ಮತ್ತು ಕಣ್ವ ಸೇರಿದಂತೆ ಹತ್ತಾರು ಬ್ಯಾರೇಜ್ ಗಳಿಂದ ಕೆರೆಗಳಿಗೆ ನೀರು ಹರಿಸಿ ತುಂಬಿಸಿಕೊಳ್ಳಲಾಗುತ್ತಿದೆ. ನ್ಯಾಯಾಲಯದ ತೀರ್ಪಿನಂತೆ ಮಂಡಳಿ ರಚನೆಯಾದರೆ ಕೆರೆ ತುಂಬಿಸಲೂ ಸಾಧ್ಯವಾಗದ ಪರಿಸ್ಥಿತಿ ತಲೆದೋರಿ ಸಮಸ್ಯೆ ಉದ್ಭವವಾಗುತ್ತದೆ. ಆದ್ದರಿಂದಲೇ ನಾನು ಕಾವೇರಿ ನೀರು ಹಂಚಿಕೆ ನಿರ್ವಹಣಾ ಮಂಡಳಿ ರಚನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದೇನೆ’ ಎಂದು ತಿಳಿಸಿದರು.

‘ಚನ್ನಪಟ್ಟಣ ತಾಲ್ಲೂಕಿನಲ್ಲಿ ಇಗ್ಗಲೂರು ಬ್ಯಾರೇಜ್‌ ಸಂದರ್ಭದಲ್ಲಿ ಯಾವುದೇ ರೈತ ನನಗೆ ಅರ್ಜಿ ನೀಡಿರಲಿಲ್ಲ. ನನ್ನ ಸ್ವಂತ ಇಚ್ಛಾಶಕ್ತಿಯಿಂದ ಬ್ಯಾರೇಜ್‌ ನಿರ್ಮಿಸಿದೆ. ಆದರೆ ಕಾವೇರಿ ತೀರ್ಪಿನ ವಿಚಾರದಲ್ಲಿ ಇಗ್ಗಲೂರು ಏತ ನೀರಾವರಿ ಯೋಜನೆಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿರುವುದು, ನೋಡಿದರೆ ಮುಂದಿನ ದಿನಗಳಲ್ಲಿ ಚನ್ನ ಪಟ್ಟಣ ತಾಲ್ಲೂಕಿನ ರೈತರನ್ನು ನೆನೆದರೆ ನನಗೆ ದುಃಖವಾಗುತ್ತದೆ’ ಎಂದರು.

‘ರಾಜಕೀಯವಾಗಿ ನಮ್ಮನ್ನು ಮುಗಿಸಲು ಆಗೋಲ್ಲ ಎಂದು ಮತ್ತೊಮ್ಮೆ ರಾಜಕೀಯ ವಿರೋಧಿಗಳಿಗೆ ಅವರು ಸವಾಲೆಸೆದರು. ರಾಜ್ಯದಲ್ಲಿ ಜೆಡಿಎಸ್ ನೆಲಕಚ್ಚಿಸಬೇಕು ಎನ್ನುವವ ರಿಗೆ ಜ್ಞಾನೋದಯವಾಗುವ ಕಾಲ ದೂರ ಇಲ್ಲ. ಜೆಡಿಎಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನನ್ನನ್ನು ಮತ್ತು ಎಚ್.ಡಿ. ಕುಮಾರಸ್ವಾಮಿ ಅವರನ್ನು ರಾಮನಗರ ಜಿಲ್ಲೆಯ ಜನತೆ ಎಂದಿಗೂ ಕೈ ಬಿಟ್ಟಿಲ್ಲ. ನಮ್ಮಿಬ್ಬರಿಗೂ ಇಲ್ಲಿನ ಮತದಾರರು ರಾಜಕೀಯವಾಗಿ ಪುನರ್‌ಜನ್ಮ ನೀಡಿದ್ದಾರೆ’ ಎಂದು ಭಾವುಕರಾದರು.

ವಿಧಾನ ಪರಿಷತ್‌ ಸದಸ್ಯ ಅಪ್ಪಾಜಿಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ. ಮಹದೇವಯ್ಯ, ಸದಸ್ಯರಾದ ಎಸ್.ಪಿ. ಜಗದೀಶ್, ಭದ್ರಯ್ಯ, ಎಚ್.ಎನ್‌. ಲಕ್ಷ್ಮೀಕಾಂತ್, ಮಾಜಿ ಸದಸ್ಯ ಎಚ್. ಶಿವಪ್ರಸಾದ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಅಶೋಕ್‌ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಹಿರಿಯ ವಕೀಲ ಎನ್. ಸುಬ್ಬಾಶಾಸ್ತ್ರಿ, ಕೂಟಗಲ್‌ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಕೆ. ಶಾಂತಪ್ಪ, ಮುಖಂಡರಾದ ಶಿವರಾಮೇಗೌಡ, ಅನಿರುದ್ದೀನ್, ವಿ. ನರಸಿಂಹಮೂರ್ತಿ, ಪೊಲೀಸ್ ರಾಮಣ್ಣ, ಕೂಟಗಲ್‌ ನಾಗರಾಜು, ತಡಿಕವಾಗಿಲು ರಾಮಣ್ಣ, ಅಜಯ್‌ದೇವೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.