ಕನಕಪುರ: ಹಾಲಿನಲ್ಲಿ ಕೊಬ್ಬಿನಂಶ (ಜಿಡ್ಡು) ಕಡಿಮೆಯಿದೆ ಎಂದು ಹಾಲು ಶೀತಲೀಕರಣ ಘಟಕದವರು ಹಾಲು ತುಂಬಿದ ಕ್ಯಾನ್ ವಾಪಸ್ ಕಳಿಸಿದ್ದರಿಂದ ತಾಲ್ಲೂಕಿನ ಯಡಮಾರನಹಳ್ಳಿ ಗ್ರಾಮದ ರೈತರು ಡೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಯಡಮಾರನಹಳ್ಳಿ ಗ್ರಾಮದಿಂದ ಸೋಮವಾರ ಸಂಜೆ ತೆಗೆದುಕೊಂಡು ಹೋಗಿದ್ದ ಕೆಲವು ಹಾಲಿನ ಕ್ಯಾನ್ಗಳಲ್ಲಿ ಜಿಡ್ಡಿನಂಶ ಕಡಿಮೆಯಿದೆ ಎಂದು ಶೀತಲೀಕರಣ ಕೇಂದ್ರದಿಂದ ವಾಪಸ್ ಕಳಿಸಿದ್ದಾರೆ. ಅದನ್ನು ಚರಂಡಿಗೆ ಸುರಿಯ
ಲಾಗಿದೆ ಎಂದು ರೈತರು ದೂರಿದರು.
ಹತ್ತಾರು ವರ್ಷಗಳಿಂದ ಡೇರಿಯಲ್ಲಿ ಹಾಲು ಸಂಗ್ರಹಿಸಿ ಕಳುಹಿಸಿ ಕೊಡಲಾಗುತ್ತಿದೆ. ಒಮ್ಮೆಯೂ ಹಾಲು ಹೆಚ್ಚಿನ ಫ್ಯಾಟ್ ಬಂದಿಲ್ಲವೆಂದು ತಿಳಿಸಿರಲಿಲ್ಲ. 230 ಮಂದಿ ಹಾಲು ಉತ್ಪಾದಕರು ಇದ್ದಾರೆ. ಸಂಘದಲ್ಲಿ ಸುಮಾರು ₹ 5 ಲಕ್ಷದಷ್ಟು ಲಾಭಾಂಶ ಬಂದಿದ್ದು ಡೇರಿ ಉತ್ತಮವಾಗಿ ನಡೆಯುತ್ತಿದೆ ಎಂದು ವಿವರಿಸಿದರು.
ಲಾಭಾಂಶವನ್ನು ಕೆಲವು ದಿನಗಳ ಹಿಂದೆ ಡೇರಿ ನಿರ್ದೇಶಕರ ವಿರೋಧದ ನಡುವೆಯು ಬೋನಸ್ ರೂಪದಲ್ಲಿ ಕುಕ್ಕರ್ ಮತ್ತು ಇತರೆ ವಸ್ತುಗಳನ್ನು ಹಂಚಲು ಬಳಕೆ ಮಾಡಿಕೊಳ್ಳಲಾಗಿದೆ. ಅದನ್ನು ಪ್ರಶ್ನಿಸಿದ್ದಕ್ಕೆ ದುರುದ್ದೇಶದಿಂದ ಡೇರಿ ವಿಸ್ತರಣಾಧಿಕಾರಿ ರವೀಂದ್ರ ಎಂಬುವರು ಯಡಮಾರನಹಳ್ಳಿ ಡೇರಿಗೆ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿದರು.
ಸರ್ಕಾರವು ಹೈನುಗಾರಿಕೆ ಉತ್ತೇಜಿಸಲು ₹5 ಪ್ರೋತ್ಸಾಹಧನ ನೀಡಿ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುವಂತೆ ಒತ್ತಾಯಿಸುತ್ತಿದೆ. ಗ್ರಾಮ
ದಲ್ಲಿನ ಬಹುತೇಕ ರೈತರು ಹೈನುಗಾರಿಕೆಯಲ್ಲಿ ತೊಡಗಿದ್ದು ಹೆಚ್ಚಿನ ಹಾಲು ಉತ್ಪಾದಿಸುತ್ತಿದ್ದಾರೆ. ರೈತರ ಲಾಭಾಂಶದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿರುವುದನ್ನು ಪ್ರಶ್ನಿಸಿದ್ದಕ್ಕೆ ರವೀಂದ್ರ ಮತ್ತು ಹಾಲು ಒಕ್ಕೂಟದವರು ಸೇರಿಕೊಂಡು ಕುತಂತ್ರದಿಂದ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ತಾವು ಮಾಡಿರುವ ತಪ್ಪನ್ನು ಮುಚ್ಚಿಕೊಳ್ಳಲು ಅಮಾಯಕ ರೈತರ ಹಾಲನ್ನು ವಾಪಸ್ ಕಳಿಸಲಾಗುತ್ತಿದೆ. ಇದು ರೈತರ ಭವಿಷ್ಯದ ಪ್ರಶ್ನೆಯಾಗಿದ್ದು ಹಾಲು ಒಕ್ಕೂಟದವರು ಕೂಡಲೇ ರವೀಂದ್ರ ಅವರು ಗ್ರಾಮದಲ್ಲಿ ಮಾಡುತ್ತಿರುವ ಅನ್ಯಾಯದ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವೇ ಹೋರಾಟವನ್ನು ಮುಂದುವರಿಸುವುದಾಗಿ ರೈತರು ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.