ADVERTISEMENT

‘ಸಚಿವ, ಶಾಸಕ ಹೇಳಿಕೆ ಅಪಹಾಸ್ಯದ ಸಂಗತಿ’

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 5:59 IST
Last Updated 7 ಜನವರಿ 2018, 5:59 IST

ಚನ್ನಪಟ್ಟಣ: ಸಚಿವರು ಹಾಗೂ ಶಾಸಕರು ತಮ್ಮ ಅವಹೇಳನಕಾರಿ ಮಾತು ನಿಲ್ಲಿಸಿ ತಾಲ್ಲೂಕಿನ ಜ್ವಲಂತ ಸಮಸ್ಯೆ ಪರಿಹರಿಸುವಲ್ಲಿ ಗಮನ ನೀಡಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಆಗ್ರಹಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಪರಸ್ಪರ ಆರೋಪ ಎಲ್ಲೆ ಮೀರಬಾರದು. ಮದುವೆ ಮಾಡಿಕೊಂಡಿದ್ದೇನೆ ಎಂದು ಸಚಿವರು ಹೇಳಿರುವುದು, ಪೊರಕೆಯಲ್ಲಿ ಹೊಡೆಸುತ್ತೇನೆಂದು ಶಾಸಕರು ಹೇಳಿರುವುದು ಅಪಹಾಸ್ಯದ ಸಂಗತಿ ಎಂದು ಟೀಕಿಸಿದ್ದಾರೆ.

ತಾಲ್ಲೂಕು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಇತಿಹಾಸ ಪ್ರಸಿದ್ಧ ಮಹದೇಶ್ವರ ದೇವಸ್ಥಾನ ಹಾಗೂ ಅಂಬೇಡ್ಕರ್ ಭವನ ಕಳೆದ ಹತ್ತು ಹನ್ನೆರಡು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕಾರ್ಮಿಕರ ಆಶಾಕಿರಣದಂತಿದ್ದ ಸ್ಪನ್ ಸಿಲ್ಕ್ ಮಿಲ್ ಸ್ಥಗಿತಗೊಂಡು ಹಲವು ವರ್ಷಗಳೇ ಕಳೆದಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಅವರ ಕುಟುಂಬ ಬೀದಿಗೆ ಬಿದ್ದಿದೆ. ಇದಷ್ಟೇ ಅಲ್ಲದೇ ನೂರಾರು ಸಮಸ್ಯೆಗಳ ಸರಮಾಲೆಯನ್ನು ತಾಲ್ಲೂಕು ಹೊದ್ದು ಕುಳಿದಿದೆ. ಇದರ ಬಗ್ಗೆ ಗಮನ ಹರಿಸಬೇಕಿದೆ. ಇದನ್ನು ಬಿಟ್ಟು ಕೀಳುಮಟ್ಟದ ಮಾತುಗಳನ್ನು ಆಡುವುದು ಅವರ ಕೀಳು ರಾಜಕಾರಣವನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಮದುವೆ, ಪೊರಕೆ ಇವುಗಳು ಪ್ರಬುದ್ಧ ರಾಜಕಾರಣಿಗಳ ಬಾಯಲ್ಲಿ ಬರುವ ಮಾತುಗಳಲ್ಲ. ಡಿ.ಕೆ.ಶಿವಕುಮಾರ್ ಮತ್ತು ಯೋಗೇಶ್ವರ್ ಯುವ ಸಮುದಾಯವನ್ನು ದಿಕ್ಕು ತಪ್ಪಿಸುವ ಮಾತುಗಳನ್ನು ಆಡಬಾರದು. ಮಾತುಗಳ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ತಾಲ್ಲೂಕಿನ ಅಭಿವೃದ್ಧಿಯನ್ನು ಮುಖ್ಯ ಉದ್ದೇಶವಾಗಿಟ್ಟುಕೊಂಡು ಸಾಧನೆಯನ್ನು ಜನರ ಬಳಿಗೆ ತಲುಪಿಸಿ ಅವರ ಮನ ಗೆಲ್ಲುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.