ADVERTISEMENT

ಕೋವಿಡ್‌ ನಡುವೆ ಪ್ರಚಾರದ ಅಬ್ಬರ

ಮನೆ ಬಾಗಿಲಿಗೆ ಬರುವ ಅಭ್ಯರ್ಥಿಗಳು l ಅಂತರ ಪಾಲನೆ ಮರೀಚಿಕೆ

ಆರ್.ಜಿತೇಂದ್ರ
Published 22 ಏಪ್ರಿಲ್ 2021, 6:50 IST
Last Updated 22 ಏಪ್ರಿಲ್ 2021, 6:50 IST
ರಾಮನಗರದ ವಾರ್ಡೊಂದರಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು
ರಾಮನಗರದ ವಾರ್ಡೊಂದರಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು   

ರಾಮನಗರ: ಅವಳಿ ನಗರದ ನಗರಸಭೆ ಚುನಾವಣೆ ಪ್ರಚಾರ ಭರದಿಂದ ಸಾಗಿದ್ದು, ಮನೆ ಬಾಗಿಲಿಗೆ ಬರುವವರಿಂದ ಅಂತರ ಕಾಯ್ದುಕೊಳ್ಳುವುದೇ ಮತದಾರರಿಗೆ ಸವಾಲಾಗಿದೆ.

ಕೋವಿಡ್ ಎರಡನೇ ಅಲೆಯ ನಡುವೆಯೇ ಜಿಲ್ಲೆಯ ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಗಳಿಗೆ ಇದೇ 27ರಂದು ಚುನಾವಣೆ ನಡೆಯಲಿದೆ. ಪ್ರಚಾರಕ್ಕೆ ಇನ್ನು ಕೆಲವೇ ದಿನ ಬಾಕಿ ಉಳಿದಿದ್ದು, ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮನೆ ಮನೆ ಸುತ್ತುತ್ತಿದ್ದಾರೆ. ಹಿಂಡುಹಿಂಡಾಗಿ ಬರುವ ಜನರನ್ನು ಕಂಡು ಮತದಾರರು ದಂಗಾಗಿದ್ದಾರೆ. ಗುಂಪಾಗಿ ಬರುವವರ ಜೊತೆ ಸೋಂಕು ಹರಡಬಹುದು ಎನ್ನುವ ಆತಂಕ ಅವರದ್ದು.

ಕೋವಿಡ್ ಹಿನ್ನೆಲೆಯಲ್ಲಿ ಪ್ರಚಾರದ ವೇಳೆ ಹಲವು ನಿರ್ಬಂಧಗಳನ್ನು ವಿಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಜಿಲ್ಲಾಡಳಿತ ಸಹ ಐದಕ್ಕೂ ಹೆಚ್ಚು ಮಂದಿ ಒಟ್ಟಾಗಿ ಪ್ರಚಾರ ನಡೆಸಕೂಡದು ಎಂದು ಸೂಚಿಸಿದೆ. ಆದರೆ, ಬಹುತೇಕ ಅಭ್ಯರ್ಥಿಗಳು ಈ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಬಳಕೆ, ಪರಸ್ಪರ ಅಂತರ ಪಾಲನೆ ಕಡ್ಡಾಯ ಆದರೂ ಎಲ್ಲಿಯೂ ಈ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ.

ADVERTISEMENT

ಸಮಾವೇಶಗಳಿಗೆ ಕತ್ತರಿ: ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಸಮಾವೇಶಗಳ ಆಯೋಜನೆಗೆ ಮುಂದಾಗದೇ ಇರುವುದು ಸದ್ಯ ಸಮಾಧಾನ ತಂದಿದೆ. ಆರಂಭದಲ್ಲಿ ಜೆಡಿಎಸ್‌ ಒಂದೆರಡು ಕಡೆ ಚುನಾವಣಾ ಪೂರ್ವ ಸಭೆಗಳನ್ನು ನಡೆಸಿತ್ತು. ಚನ್ನಪಟ್ಟಣದಲ್ಲಿ ಸಚಿವ ಸಿ.ಪಿ. ಯೋಗೇಶ್ವರ್‌ ಸಹ ಸಭೆ ನಡೆಸಿದ್ದರು. ಅದನ್ನು ಹೊರತುಪಡಿಸಿ ಈಚೆಗೆ ದೊಡ್ಡ ಮಟ್ಟದ ಕಾರ್ಯಕ್ರಮಗಳು ನಡೆದಿಲ್ಲ. ಇದೀಗ ಸರ್ಕಾರವೇ ರಾಜಕೀಯ ಸಮಾವೇಶಗಳಿಗೆ ನಿರ್ಬಂಧ ಹೇರಿದ್ದು, ಇನ್ನುಳಿದ ದಿನವೂ ಮನೆ ಮನೆ ಪ್ರಚಾರವೇ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.