ಕನಕಪುರ ಅಚ್ಚಲು ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡ
ಕನಕಪುರ: ತಮಿಳುನಾಡಿನ ಚೆನ್ನೈನ ಎಸ್ಎಸ್ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪೋರ್ಟ್ಸ್ ಫಾರ್ ಚೇಂಜ್ ನ್ಯಾಷನಲ್ ಫೈನಲ್ನಲ್ಲಿ ಅಚ್ಚಲು ಸರ್ಕಾರಿ ಶಾಲೆ ವಾಲಿಬಾಲ್ ತಂಡ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದೆ.
ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಅಚ್ಚಲು ಸರ್ಕಾರಿ ಶಾಲೆಯು ರಾಮನಗರದಲ್ಲಿ ನಡೆದ ಜಿಲ್ಲಾ ಮಟ್ಟದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಪ್ರತಿನಿಧಿಸಿತ್ತು.
ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದಲ್ಲಿ, ತುಮಕೂರಿನಲ್ಲಿ ನಡೆದ ವಲಯ ಮಟ್ಟದ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿತ್ತು.
ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ತಮಿಳುನಾಡು ರಾಜ್ಯ ತಂಡದ ಎದುರು 5 ಸೆಟ್ಗಳಲ್ಲಿ ನೇರ ಮೂರು ಸೆಟ್ಗಳನ್ನು ಗೆದ್ದು 3:0 ಅಂತರದಲ್ಲಿ ಗೆದ್ದು ಜಯ ಸಾಧಿಸಿ ಚಿನ್ನದ ಪದಕ ತನ್ನದಾಗಿಸಿ ಕೊಂಡಿದೆ. ತರಬೇತುದಾರ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಎಸ್.ನಾಗರಾಜು ಎಲ್ಲ ಹಂತಗಳಲ್ಲೂ ಮಾರ್ಗದರ್ಶಿಯಾಗಿದ್ದರು.
ವಾಲಿಬಾಲ್ ತಂಡವನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಅಚ್ಚಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣ, ಪಂಚಾಯಿತಿ ಮಾಜಿ ಅಧ್ಯಕ್ಷ ದೊಡ್ಡಮನೆ ಸತೀಶ್ ಹಾಗೂ ಎಸ್ಡಿಎಂಸಿ ಅಧ್ಯಕ್ಷ ಮತ್ತು ಪದಾಧಿಕಾರಿಗಳು, ಶಾಲೆಯ ಹಿರಿಯ ವಿದ್ಯಾರ್ಥಿಗಳು ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.