ಚನ್ನಪಟ್ಟಣ: ‘ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಅಂತರ್ಜಾಲವನ್ನು ಸಮರ್ಪಕವಾಗಿ ಬಳಸುವ ಕುರಿತು ಮಾಹಿತಿ ನೀಡುವ ಅಗತ್ಯ ಇದೆ’ ಎಂದು ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಕೆ.ಎಸ್.ಲಕ್ಷ್ಮಣಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಕುವೆಂಪು ನಗರದ ಗುರುಕೃಪ ಕಟ್ಟಡದಲ್ಲಿ ಗೂಗಲ್, ಟಾಟಾ, ವಾಯ್ಸ್ ಫೌಂಡೇಷನ್, ಬಿಡದಿಯ ಸ್ಯಾಕ್ರೀಡ್ ಸಂಸ್ಥೆ ವತಿಯಿಂದಶನಿವಾರ ಹಮ್ಮಿಕೊಂಡಿದ್ದ ‘ಇಂಟರ್ನೆಟ್ ಸಾಥಿ’ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುವ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಇಂಟರ್ನೆಟ್ನಿಂದ ಗ್ರಾಮೀಣ ಮಹಿಳೆಯರು ಸಾಕಷ್ಟು ಉಪಯುಕ್ತ ವಿಷಯ ಕಲಿಯಬಹುದು. ಇಂದು ಎಲ್ಲರ ಬಳಿಯೂ ಫೋನ್ ಇದೆ. ಇಂಟರ್ನೆಟ್ ಸೌಲಭ್ಯವೂ ಇದೆ. ಆದರೆ ಇದನ್ನು ಸದ್ಬಳಕೆ ಮಾಡಿಕೊಳ್ಳುವ ವಿಧಾನ ತಿಳಿಯದೆ ಯಾವುದೋ ಧಾರಾವಾಹಿ, ಅನುಪಯುಕ್ತ ಆ್ಯಪ್ಗಳಿಗಷ್ಟೆ ಸೀಮಿತವಾಗಿದ್ದಾರೆ. ಅದರಿಂದ ಸಿಗುವ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು’ ಎಂದರು.
‘ವೃತ್ತಿ ಕೌಶಲ ಹೆಚ್ಚಿಸಿಕೊಳ್ಳುವುದಕ್ಕೆ ಇಂಟರ್ನೆಟ್ ಸಹಾಯಕಾರಿಯಾಗಿದೆ. ವಿವಿಧ ಮಾಹಿತಿ ಪಡೆಯುವುದು, ಹೊಸ ಹೊಸ ವಿಧಾನಗಳನ್ನು ತಿಳಿದು, ಅದನ್ನು ಅಳವಡಿಸಿಕೊಳ್ಳುವ ಜತೆಗೆ ಕೃಷಿ ಕ್ಷೇತ್ರದ ಅಭಿವೃದ್ಧಿ, ಹೈನುಗಾರಿಕೆಯ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆಯುವ ವಿಧಾನವನ್ನು ಸ್ವಯಂಸೇವಕರು ಗ್ರಾಮೀಣ ಮಹಿಳೆಯರಿಗೆ ತಿಳಿಸಿಕೊಡಬೇಕು’ ಎಂದು ಹೇಳಿದರು.
ಸ್ಯಾಕ್ರೀಡ್ ಸಂಸ್ಥೆಯ ಫಿಲೋಮಿನಾ, ಸಹಾಯಕ ಸಿಡಿಪಿಒ ಅಹಲ್ಯ, ವಾಯ್ಸ್ ಸಂಸ್ಥೆಯ ಯಶ್, ಚನ್ನಪಟ್ಟಣ ತಾಲ್ಲೂಕು ಸಂಯೋಜಕ ರವಿಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.