ಮಾಗಡಿ: ಪಟ್ಟಣದ ಬಿ.ಕೆ.ರಸ್ತೆಯಲ್ಲಿ ಪಂಕ್ಚರ್ ಶಾಪ್ನಲ್ಲಿ ಸೋಮವಾರ ಬೆಳಿಗ್ಗೆ 7.30ರಲ್ಲಿ ಏರ್ ಕಂಪ್ರೆಸರ್ ಸ್ಫೋಟಿಸಿ ಮಾಲೀಕ ರವಿ(50) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೂರು ದಿನಗಳಿಂದ ಶಾಪ್ ಬಾಗಿಲು ಮುಚ್ಚಲಾಗಿತ್ತು. ಸೋಮವಾರ ಬೆಳಿಗ್ಗೆ ಬಾಗಿಲು ತೆರೆದು ಕಸ ಗುಡಿಸುವಾಗ ಏಕಾಏಕಿ ಕಂಪ್ರೆಸರ್ ಸ್ಫೋಟಗೊಂಡಿದೆ. ಸಿಡಿತದ ರಭಸಕ್ಕೆ ಮಾಲೀಕರ ದೇಹ ಛಿದ್ರವಾಗಿದೆ. ಶೀಟುಗಳು ಪುಡಿಯಾಗಿದ್ದು, ಕಟ್ಟಡದ ಗೋಡೆ ಕುಸಿದಿದೆ. ಭಾರಿ ಶಬ್ದಕ್ಕೆ ಹೆದರಿದ ನೆರೆಹೊರೆಯವರು ಮನೆಯಿಂದ ಹೊರಗೆ ಓಡಿಬಂದರು.
ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಬೆಳವಂಗಲ ಮತ್ತು ಎಎಸ್ಐ ಕೃಷ್ಣಪ್ಪ, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಗೃಹರಕ್ಷಕ ದಳದ ನರಸಿಂಹಮೂರ್ತಿ ಮತ್ತು ಯುವಕರ ಸಹಾಯದಿಂದ ಯಂತ್ರದ ಕೆಳಗೆ ಸಿಲುಕಿ ದೇಹವನ್ನು ಹೊರತೆಗೆಯಲಾಯಿತು. ಪಂಕ್ಚರ್ ಶಾಪ್ ಪಕ್ಕದಲ್ಲಿರುವ ಕೋಳಿ ಮಾರಾಟ ಕೇಂದ್ರದ ಶೀಟುಗಳೂ ಪುಡಿಯಾಗಿವೆ. ರವಿ ಅವರ ಕಣ್ಣನ್ನು ಬಿಡದಿಯ ಕಣ್ಣಿನ ಆಸ್ಪತ್ರೆಗೆ ನೇತ್ರದಾನ ಮಾಡಲಾಯಿತು. ಜಡೇದೇವರ ಮಠದ ರಸ್ತೆಯಲ್ಲಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.
ಮನವಿ: ‘ಪಟ್ಟಣದಲ್ಲಿರುವ ಎಲ್ಲ ಪಂಕ್ಚರ್ ಶಾಪ್ಗಳು ಮತ್ತು ಏರ ಕಂಪ್ರೆಸರ್ ಬಳಸುವವರ ಸಭೆ ಕರೆದು ಪೊಲೀಸರು ಎಚ್ಚರಿಕೆ ನೀಡಬೇಕು. ನಿರ್ವಹಣೆ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಸಂಭವನೀಯ ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ’ ಎಂದು ಭಾರತೀಯ ವಾಯುಸೇನೆಯ ನಿವೃತ್ತ ಅಧಿಕಾರಿ ಶಿವಲಿಂಗಯ್ಯ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.