ADVERTISEMENT

ವಾಯುಸೇನೆ ನೇಮಕಾತಿ ರ್‍ಯಾಲಿ 17ರಿಂದ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 4:52 IST
Last Updated 5 ಜುಲೈ 2019, 4:52 IST
   

ರಾಮನಗರ: ಭಾರತೀಯ ವಾಯು ಸೇನೆಯು ಇದೇ 17 ರಿಂದ 23 ರವರೆಗೆ ಶಿವಮೊಗ್ಗದಲ್ಲಿನ ನೆಹರು ಕ್ರೀಡಾಂಗಣದಲ್ಲಿ ನೇಮಕಾತಿ ರ್‍ಯಾಲಿ ಆಯೋಜಿಸಿದೆ. ರಾಜ್ಯದ ಪುರುಷ ವಿದ್ಯಾರ್ಥಿಗಳು ಆಯಾ ಜಿಲ್ಲೆಗೆ ನಿಗದಿಪಡಿಸಿದ ದಿನಾಂಕದಂದು ಭಾಗವಹಿಸಬಹುದು.

ಇದೇ 17 ಮತ್ತು 18ರಂದು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಅಭ್ಯರ್ಥಿಗಳು ಪಾಲ್ಗೊಳ್ಳಬೇಕು. ಇದೇ 22 ಮತ್ತು 23ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಮಡಿಕೇರಿ, ದಕ್ಷಿಣ ಕನ್ನಡ (ಮಂಗಳೂರು), ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಗದಗ, ಕೊಪ್ಪಳ, ಹಾವೇರಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ಅಭ್ಯರ್ಥಿಗಳು ದೇಹದಾರ್ಢ್ಯ ಮತ್ತು ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಬಹುದಾಗಿದೆ. ಇದೇ 19 ಮತ್ತು 20 ರಂದು ರಾಜ್ಯದ ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.

ಅಭ್ಯರ್ಥಿಯು ಕನಿಷ್ಠ ದ್ವಿತೀಯ ಪಿ.ಯು. ಉತ್ತೀರ್ಣರಾಗಿದ್ದು, ಇಂಗ್ಲಿಷ್ ನಲ್ಲಿ ಕನಿಷ್ಠ 50 ಅಂಕಗಳನ್ನು ಗಳಿಸಿರಬೇಕು. ನೇಮಕಾತಿಗೆ ನಿಗದಿಪಡಿಸಿದ ಎತ್ತರ ಹಾಗೂ ತೂಕ ಹೊಂದಿರಬೇಕು. 1999ರ ಜುಲೈನಿಂದ 2003ರ ಜುಲೈ 1ರ ಒಳಗೆ ಜನಿಸಿದ ಅಭ್ಯರ್ಥಿಗಳಾಗಿರಬೇಕು. ಅಭ್ಯರ್ಥಿ ತನ್ನ ವಿದ್ಯಾರ್ಹತೆಯ ಮೂಲ ಹಾಗೂ 4 ನಕಲು ಪ್ರತಿಗಳು ಹಾಗೂ 30 ಭಾವಚಿತ್ರಗಳು, ಆಧಾರ್ ಕಾರ್ಡ್ ಇತ್ಯಾದಿಗಳನ್ನು ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ₨30 ಸಾವಿರ ವೇತನ ಹಾಗೂ ಭತ್ಯೆ ನೀಡಲಾಗುವುದು. ನೇಮಕಾತಿಗೆ ಆಗಮಿಸುವ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆ, ಸೌಲಭ್ಯಗಳನ್ನು ಒದಗಿಸಲಾಗುವುದಿಲ್ಲ.

ADVERTISEMENT

ಮಾಹಿತಿಗಾಗಿ ಭಾರತೀಯ ವಾಯುಪಡೆಯ ಜಾಲತಾಣ ಅಥವಾ ಏರ್‍ಮೆನ್ ಆಯ್ಕೆ ಕೇಂದ್ರ (ಏರ್‍ಮೆನ್ ಸೆಲೆಕ್ಷನ್ ಸೆಂಟರ್), ಸಂ.1, ಕಬ್ಬನ್ ರಸ್ತೆ, ಬೆಂಗಳೂರು – 560 001. ದೂ.ಸಂ. 080-–25592199 ಸಂಪರ್ಕಿಸಬೇಕು. ಅಥವಾ ಇಲ್ಲಿನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ದೂ.ಸಂ. 080-27273364 ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.