ರಾಮನಗರ: ಬಸವ ಜಯಂತಿ ಹಾಗೂ ಅಕ್ಷಯ ತೃತೀಯದ ಶುಭ ದಿನವಾದ ಮಂಗಳವಾರ ನಗರದಲ್ಲಿ ಚಿನ್ನಾಭರಣ ಖರೀದಿಗೆ ಗ್ರಾಹಕರು ಹೆಚ್ಚು ಉತ್ಸಾಹ ತೋರಿದರು.
ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಿದರೆ ಮುಂದೆ ಶುಭವಾಗಿ ಐಶ್ಚರ್ಯ ದುಪ್ಪಟ್ಟಾಗುತ್ತದೆ ಎನ್ನುವುದು ಜನರ ನಂಬಿಕೆ. ಹೀಗಾಗಿ ಗ್ರಾಹಕರು ಬೆಳಗ್ಗೆಯಿಂದಲೇ ಪ್ರಮುಖ ಆಭರಣ ಮಳಿಗೆಗಳ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಯಾವ ಅಂಗಡಿಯಲ್ಲಿ ಏನೆಲ್ಲ ರಿಯಾಯಿತಿ ಇದೆ. ಬೆಲೆ ಎಷ್ಟು? ತಯಾರಿಕೆಯ ಶುಲ್ಕ ಎಷ್ಟು ಎಂಬುದನೆಲ್ಲ ವಿಚಾರಿಸಿಕೊಂಡು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಭರಣ ಕೊಂಡು ಸಂಭ್ರಮಿಸಿದರು. ಕೆಲವರು ಬಂಗಾರದ ಕಿರು ನಾಣ್ಯಗಳನ್ನು ಒಯ್ದರು. ಪ್ರಸಿದ್ಧ ಆಭರಣ ಮಳಿಗೆಗಳಲ್ಲಿ ಕಾಲಿಡಲು ಜಾಗವಿಲ್ಲದಂತಹ ಪರಿಸ್ಥಿತಿ ಇದ್ದು, ಜನರು ಸಾಲುಗಟ್ಟಿ ನಿಂತಿದ್ದರು. ರಾತ್ರಿವರೆಗೂ ವ್ಯಾಪಾರ ನಡೆಯಿತು.
ಮುಂಗಡ ಬುಕ್ಕಿಂಗ್, ರಿಯಾಯಿತಿ
ದೊಡ್ಡ ಆಭರಣ ಮಳಿಗೆಗಳು ವಾರದ ಮುಂಚೆಯೇ ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದು, ಮಂಗಳವಾರ ಆಭರಣ ನೀಡಿದವು. ಸಾಕಷ್ಟು ಗ್ರಾಹಕರು ಹಿಂದಿನ ದಿನಗಳಲ್ಲಿಯೇ ಬಂದು ನೆಚ್ಚಿನ ವಿನ್ಯಾಸದ ಆಭರಣಗಳನ್ನು ಆಯ್ಕೆ ಮಾಡಿಕೊಂಡು ಕಾಯ್ದಿರಿಸಿ ಹೋಗಿದ್ದರು. ಅಕ್ಷಯ ತೃತೀಯದಂದು ಹಣ ಕೊಟ್ಟು ಕೊಂಡೊಯ್ದರು.
ಗ್ರಾಹಕರನ್ನು ಸೆಳೆಯಲು ಕೆಲವು ಆಭರಣ ಮಳಿಗೆಗಳು ವಿಶೇಷ ರಿಯಾಯಿತಿ ಘೋಷಿಸಿದ್ದವು. ಕೊಳ್ಳುವ ಚಿನ್ನದ ತೂಕದಷ್ಟೇ ಬೆಳ್ಳಿಯನ್ನು ಉಡುಗೊರೆಯಾಗಿ ನೀಡಿದವು. ಅಂಗಡಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
*ಅಕ್ಷಯ ತೃತೀಯ ದಿನದಂದು ಸ್ವಲ್ಪವಾದರೂ ಚಿನ್ನ ಕೊಳ್ಳುವ ಅಭ್ಯಾಸ ಇದೆ. ಹೀಗಾಗಿ ಮುಂಚೆಯೇ ಕಾಯ್ದಿರಿಸಿ ಇಂದು ಆಭರಣ ಪಡೆಯಲು ಬಂದಿದ್ದೇನೆ
-ಜಯಲಕ್ಷ್ಮಿ,ಗ್ರಾಹಕಿ, ರಾಮನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.