ರಾಮನಗರ: ಎಚ್.ಡಿ. ಕುಮಾರಸ್ವಾಮಿ ಯಾವುದೇ ತಪ್ಪು ಮಾಡಿಲ್ಲ. ಅವರ ವಿರುದ್ಧದ ದೂರವಾಣಿ ಕದ್ದಾಲಿಕೆ ಆರೋಪದ ಸಿಬಿಐ ತನಿಖೆಯು ಪಾರದರ್ಶಕವಾಗಿ ನಡೆಯಲಿ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ಕುಮಾರಸ್ವಾಮಿ ಹೋರಾಟ ಮಾಡಿಕೊಂಡೇ ರಾಜಕಾರಣದಲ್ಲಿ ಬೆಳೆದವರು. ಇಂತಹ ಯಾವುದೇ ಬೆದರಿಕೆಗೂ ಅವರು ಬಗ್ಗುವುದಿಲ್ಲ. ತಾನು ತಪ್ಪು ಮಾಡಿಲ್ಲ ಎಂದು ಅವರು ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ’ ಎಂದರು.
‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿರೋಧ ಪಕ್ಷದವರನ್ನು ಹೆದರಿಸಿ ಇಡುವ ವಾತಾವರಣ ಸೃಷ್ಟಿಯಾಗಿದೆ. ಕುಮಾರಸ್ವಾಮಿ ಅವರ ವ್ಯಕ್ತಿತ್ವಕ್ಕೆ ಕಳಂಕ ತರಲೆಂದು ಈ ರೀತಿ ಆಪಾದನೆ ಮಾಡುತ್ತಿದ್ದಾರೆ. ಆದರೆ ಅದೆಲ್ಲವೂ ವಿಫಲ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ರಾಜ್ಯದ 25 ಲೋಕಸಭಾ ಕ್ಷೇತ್ರಗಳಲ್ಲಿ ಜನರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಎಷ್ಟೆಲ್ಲ ತೊಂದರೆ ಆಗಿದೆ. ಅಲ್ಲಿಗೆ ಕೇಂದ್ರದಿಂದ ನೆರವು ತರುವ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಏನನ್ನೂ ಮಾತನಾಡುವುದಿಲ್ಲ. ರಾಜ್ಯದಲ್ಲಿ ಇನ್ನೂ ಮಂತ್ರಿಮಂಡಲವೇ ರಚನೆ ಆಗಿಲ್ಲ. ಪ್ರಧಾನಿಗಳೇ ರಾಜ್ಯಕ್ಕೆ ಇಂತಿಷ್ಟು ನೆರವು ನೀಡುತ್ತೇವೆ ಎಂದು ಘೋಷಿಸಬಹುದಿತ್ತು. ಆದರೆ ಬಿಜೆಪಿಯವರು ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.