ADVERTISEMENT

ರಾಮನಗರ: ಲಾಂಗ್ ಹಿಡಿದು ಯುವಕನ ಅಟ್ಟಾಡಿಸಿದ ರೌಡಿಗಳು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 11:04 IST
Last Updated 5 ಮಾರ್ಚ್ 2024, 11:04 IST
<div class="paragraphs"><p>ಮಹಾಲಿಂಗ</p></div>

ಮಹಾಲಿಂಗ

   

ರಾಮನಗರ: ನಗರದ ರಾಯರದೊಡ್ಡಿಯಲ್ಲಿ ಮೂವರು ರೌಡಿಗಳ ಗುಂಪೊಂದು ಲಾಂಗ್ ಹಿಡಿದು ಮಹಾಲಿಂಗ ಎಂಬ ಯುವಕನನ್ನು ಅಟ್ಟಾಡಿಸಿ ಕೊಲೆ ಮಾಡಲು ಯತ್ನಿಸಿದೆ. ಮಾರ್ಚ್ 1ರಂದು ನಡೆದಿರುವ ಘಟನೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ಈ ಕುರಿತು ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯರದೊಡ್ಡಿಯಲ್ಲಿರುವ ತಮ್ಮ ಮನೆ ಬಳಿಯ ಬ್ಯೂಟಿ ಪಾರ್ಲರ್ ಬಳಿ ಮಹಾಲಿಂಗ ತನ್ನ ಪತ್ನಿಯೊಂದಿಗೆ ನಿಂತಿದ್ದ. ಇದೇ ವೇಳೆ, ವಾಹನದಲ್ಲಿ ಬಂದಿಳಿದ ಮೂವರು ರೌಡಿಗಳು ಕೈಯಲ್ಲಿ ಲಾಂಗ್ ಹಿಡಿದುಕೊಂಡು ಮಹಾಲಿಂಗನತ್ತ ನುಗ್ಗಿದರು. ಅವರನ್ನು ಕಂಡೊಡನೆ ಮಹಾಲಿಂಗ, ‘ನಾನೇನು ಮಾಡಿಲ್ರಪ್ಪಾ... ನಾನೇನು ಮಾಡಿಲ್ಲ’ ಎನ್ನುತ್ತಾ ತಪ್ಪಿಸಿಕೊಳ್ಳಲು ಸ್ಥಳದಲ್ಲಿ ಓಡಿದರು ಎಂದು ಪೊಲೀಸರು ಹೇಳಿದರು.

ADVERTISEMENT

ಆದರೂ ಬಿಡದ ರೌಡಿಗಳು ಗಲ್ಲಿಗಳಲ್ಲಿ ಅಟ್ಟಾಡಿಸಿದ್ದಾರೆ. ಈ ವೇಳೆ ಅವರ ಪತ್ನಿ ‘ನನ್ನ ಗಂಡನ ಬಿಡ್ರೊ...’ ಎಂದು ಜೋರಾಗಿ ಕೂಗಿಕೊಂಡು ರೌಡಿಗಳ ಹಿಂದೆ ಓಡಿದ್ದಾರೆ. ಗಲ್ಲಿಗಳಲ್ಲಿ ಓಡಿದ ಮಹಾಲಿಂಗ ರೌಡಿಗಳಿಂದ ತಪ್ಪಿಸಿಕೊಂಡಿದ್ದಾನೆ. ಇಡೀ ಘಟನೆಯು ಮನೆಯೊಂದರ ಬಳಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ತಿಳಿಸಿದರು.

ಕೆಲ ವರ್ಷಗಳ ಹಿಂದೆ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಮಹಾಲಿಂಗ ವಿರುದ್ಧ ಐಜೂರು ಮತ್ತು ಬಿಡದಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಾಗಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಆತನ ಎದುರು ಗುಂಪಿನವರು ಕೊಲೆಗೆ ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.