ಚನ್ನಪಟ್ಟಣ: ಆಟೋ ರಿಕ್ಷಾ ಚಾಲಕರು ಹಾಗೂ ಇತರೆ ಸರಕು ಸಾಗಣೆ ವಾಹನ ಚಾಲಕರು ಸಂಚಾರ ನಿಯಮವನ್ನು ಪಾಲಿಸಬೇಕು ಎಂದು ನಗರ ಸರ್ಕಲ್ ಇನ್ಸ್ಪೆಕ್ಟರ್ ಗೋವಿಂದರಾಜು ಎಚ್ಚರಿಕೆ ನೀಡಿದರು.
ಪಟ್ಟಣದ ಪುರ ಠಾಣೆಯ ತಮ್ಮ ಕಚೇರಿಯಲ್ಲಿ ಮಂಗಳವಾರ ಪ್ಯಾಸೆಂಜರ್ ಆಟೋ, ಆಫೆ ಆಟೋ ಹಾಗೂ ಲಘು ಸರಕು ಸಾಗಣೆ ವಾಹನ ಚಾಲಕರ ಸಭೆ ನಡೆಸಿ ಮಾತನಾಡಿ, ಸಂಚಾರ ನಿಯಮವನ್ನು ಉಲ್ಲಂಘನೆ ಮಾಡಿ ನಿಗದಿತ ಪ್ರಯಾಣಿಕರಿಗಿಂತ ಹೆಚ್ಚು ಪ್ರಯಾಣಿಕರನ್ನು ತುಂಬುವುದು, ಸಂಬಂಧಿಸಿದ ದಾಖಲೆಗಳನ್ನು ಹೊಂದದೆ ಹಾಗೂ ಚಾಲನಾ ಸಂದರ್ಭದಲ್ಲಿ ಸಮವಸ್ತ್ರ ಹಾಕದಿರುವುದರ ಬಗ್ಗೆ ಚಾಲಕರನ್ನು ಎಚ್ಚರಿಸಿದರು.
‘ಸಂಚಾರ ನಿಯಮವನ್ನು ಗಾಳಿಗೆ ತೂರಿ ಇಷ್ಟಬಂದ ರೀತಿಯಲ್ಲಿ ವಾಹನ ಚಾಲನೆ ಮಾಡುವುದು, ಸಾಕಷ್ಟು ಮಂದಿ ಚಾಲಕರು ಮಾನಮತ್ತರಾಗಿ ಚಾಲನೆ ಮಾಡುವುದು ನಮ್ಮ ಗಮನಕ್ಕೆ ಬಂದಿದೆ. ಅಂತಹ ಚಾಲಕರು ಕಂಡು ಬಂದರೆ ಕೂಡಲೇ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದರು.
ಸರಕು ಸಾಗಣೆ ವಾಹನಗಳಲ್ಲಿ ತಮಗೆ ಇಷ್ಟಬಂದಂತೆ ನಿಗದಿತ ತೂಕಕ್ಕಿಂತ ಹೆಚ್ಚು ತೂಕವನ್ನು ಹಾಕುವುದು. ಹಾಗೆಯೆ ವಾಹನದಲ್ಲಿ ಅಕ್ರಮ ವಸ್ತುಗಳನ್ನು ನಿರ್ಬಂಧಿಸಲಾಗಿದೆ. ಇಂತಹ ಪ್ರಕರಣ ಕಂಡುಬಂದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಚಾರ ಠಾಣೆಯ ಸಬ್ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಹಾಗೂ ಸಿಬ್ಬಂದಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.