ಚನ್ನಪಟ್ಟಣ: ತಾಲ್ಲೂಕಿನ ಅಬ್ಬೂರುದೊಡ್ಡಿಯಲ್ಲಿ ಅತ್ತೆಯನ್ನು ಸೊಸೆ ಅಮಾನವೀಯವಾಗಿ ಥಳಿಸಿದ ಘಟನೆಗೆ ಸಂಬಂಧಿಸಿದಂತೆ, ಸೊಸೆ ಸಂಜನಾ ಹಾಗೂ ಮಗ ರವೀಂದ್ರನನ್ನು ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ, ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇಬ್ಬರಿಗೂ ಎಚ್ಚರಿಕೆ ನೀಡಿದ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಅತ್ತೆ ಶಾಂತಮ್ಮ ಮತ್ತು ಸೊಸೆ ಸಂಜನಾ ನಡುವೆ ಮನೆಯಲ್ಲಿ ಆಗಾಗ ಜಗಳವಾಗುತ್ತಿತ್ತು. ಇದೇ ಕಾರಣಕ್ಕೆ ಕೆಲ ದಿನ ತವರು ಮನೆಗೆ ಹೋಗಿದ್ದ ಶಾಂತಮ್ಮ, ಏಪ್ರಿಲ್ 19ರಂದು ಮನೆಗೆ ವಾಪಸ್ಸಾಗಿದ್ದರು. ಆಗ ಅತ್ತೆಯೊಂದಿಗೆ ಜಗಳ ತೆಗೆದಿದ್ದ ಸಂಜನಾ, ದೊಣ್ಣೆಯಿಂದ ಹೊಡೆದಿದ್ದಳು. ಆ ದೃಶ್ಯವನ್ನು ಮಗ ರವೀಂದ್ರ ತನ್ನ ಮೊಬೈಲ್ನಲ್ಲಿ ವಿಡಿಯೊ ಮಾಡಿ, ಸಂಬಂಧಿಕರೊಂದಿಗೆ ಹಂಚಿಕೊಂಡಿದ್ದ.
ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್ನಲ್ಲಿ ಹರಿದಾಡಿದ್ದ ವಿಡಿಯೊ ವೈರಲ್ ಆಗಿತ್ತು. ಹಲ್ಲೆ ನಡೆಸಿದ ಸೊಸೆ ಮತ್ತು ಚಿತ್ರೀಕರಿಸಿದ ಮಗನ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಹೊಸದುರ್ಗ ಎಂಬುವರು ಠಾಣೆಗೆ ದೂರು ಕೊಟ್ಟಿದ್ದರು. ಆ ಮೇರೆಗೆ, ಪೊಲೀಸರು ಇಬ್ಬರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಇಬ್ಬರಿಗೂ ಬುದ್ಧಿಮಾತು ಹೇಳಿ ಜಾಮೀನು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.