ADVERTISEMENT

ಚನ್ನಪಟ್ಟಣ | ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿರೋಧಿಸಿ ಕಪ್ಪು ಬಾವುಟ ಪ್ರದರ್ಶನ

ಚಾಮುಂಡೇಶ್ವರಿ ಮೇಲೆ ನಂಬಿಕೆ ಇದೆ ಎಂದು ಮುಚ್ಚಳಿಕೆ ಬರೆಯಿಸಿಕೊಳ್ಳಿ: ಆಜಾದ್ ಬ್ರಿಗೇಡ್ ಸಂಘಟನೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 5:14 IST
Last Updated 29 ಆಗಸ್ಟ್ 2025, 5:14 IST
ಚನ್ನಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಜಾದ್ ಬ್ರಿಗೇಡ್ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಗಜೇಂದ್ರ ಸಿಂಗ್ ಮಾತನಾಡಿದರು. ಪದಾಧಿಕಾರಿಗಳಾದ ರಘು ಮಂಗಳವಾರಪೇಟೆ, ಎಂ.ಪಿ. ಆನಂದ್ ಕುಮಾರ್, ಶ್ರೀಹರಿ, ವಡ್ಡರಹಳ್ಳಿ ಹನುಮಂತು ಹಾಗೂ ಇತರು ಇದ್ದಾರೆ
ಚನ್ನಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಜಾದ್ ಬ್ರಿಗೇಡ್ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಗಜೇಂದ್ರ ಸಿಂಗ್ ಮಾತನಾಡಿದರು. ಪದಾಧಿಕಾರಿಗಳಾದ ರಘು ಮಂಗಳವಾರಪೇಟೆ, ಎಂ.ಪಿ. ಆನಂದ್ ಕುಮಾರ್, ಶ್ರೀಹರಿ, ವಡ್ಡರಹಳ್ಳಿ ಹನುಮಂತು ಹಾಗೂ ಇತರು ಇದ್ದಾರೆ   

ಚನ್ನಪಟ್ಟಣ: ‘ನಾಡಹಬ್ಬ ದಸರಾ ಉತ್ಸವದ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಬಾನು ಅವರು ದಸರಾ ಉದ್ಘಾಟಿಸಬೇಕಾದರೆ ಅವರಿಂದ, ಚಾಮುಂಡೇಶ್ವರಿ ಮೇಲೆ ನನಗೆ ನಂಬಿಕೆ ಇದೆ ಎಂದು ಮುಚ್ಚಳಿಕೆ ಬರೆಸಿಕೊಳ್ಳಬೇಕು. ಇಲ್ಲವಾದರೆ ಉದ್ಘಾಟನೆ ವೇಳೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು’ ಎಂದು ಆಜಾದ್ ಬ್ರಿಗೇಡ್ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಗಜೇಂದ್ರ ಸಿಂಗ್ ಎಚ್ಚರಿಕೆ ನೀಡಿದರು.

ನಗರದ ಪ್ರವಾಸಿಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಗಜೇಂದ್ರ ಸಿಂಗ್, ‘ಬಹುಸಂಖ್ಯಾತ ಹಿಂದೂಗಳು ಪವಿತ್ರವೆಂದು ಭಾವಿಸುವ ಅರಿಶಿಣ ಕುಂಕುಮದ ಬಗ್ಗೆ ದ್ವೇಷ ಭಾವನೆಯನ್ನು ಹೊಂದಿರುವ ಹಾಗೂ ಭುವನೇಶ್ವರಿಯನ್ನು ವಿರೋಧಿಸುವ ಬಾನು ಅವರಂತಹ ಸಂಕುಚಿತ ಮನೋಭಾವದವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದು ಅಕ್ಷಮ್ಯ’ ಎಂದರು.

‘ಬಾನು ಅವರಿಗೆ ಬೂಕರ್ ಪ್ರಶಸ್ತಿ ಬಂದಿದೆ ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ, ಪ್ರಶಸ್ತಿ ಲಭಿಸಿರುವುದು ಅವರ ಕಥಾಸಂಕಲನವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿರುವ ದೀಪಾ ಬಸ್ತಿ ಅವರಿಗೆ. ಸರ್ಕಾರ  ಪಾ ಅವರನ್ನು ದಸರಾ ಉದ್ಘಾಟನೆಗೆ ಪರಿಗಣಿಸದೆ ಬಾನು ಅವರಿಗೆ ಅವಕಾಶ ನೀಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಮುಸ್ಲಿಂ ಎಂಬ ಕಾರಣಕ್ಕೆ ನಾವು ಬಾನು ಅವರನ್ನು ವಿರೋಧಿಸುತ್ತಿಲ್ಲ. 2017ರಲ್ಲಿ ಕವಿ ಕೆ.ಎಸ್. ನಿಸಾರ್ ಅಹ್ಮದ್ ದಸರಾ ಉದ್ಘಾಟಕರಾಗಿದ್ದರು. ನಿತ್ಯೋತ್ಸವ ಕವಿ ಎಂದೇ ಜನಪ್ರಿಯರಾಗಿದ್ದ ಅವರು ಉದ್ಘಾಟನೆಗೆ ಅರ್ಹರಾಗಿದ್ದರು. ಆದರೆ, ಬಾನು ಅವರು ಭುವನೇಶ್ವರಿಯನ್ನು ಅವಹೇಳನ ಮಾಡಿದ್ದರು. ಈ ಕಾರಣದಿಂದ ವಿರೋಧಿಸುತ್ತಿದ್ದೇವೆ’ ಎಂದರು.

‘ಹಿಂದೆ ಸಿದ್ದರಾಮಯ್ಯ ಅವರು ನಾನು ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿದ್ದೆ ಎಂದು ಹೇಳುವ ಮೂಲಕ. ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದರು. ಅಂತೆಯೇ ದಸರಾ ಉದ್ಘಾಟನೆ ಮಾಡಿದ ನಂತರ ಬಾನು ಅವರು, ನಾನು ಮಾಂಸ ತಿಂದು ದಸರಾ ಉದ್ಘಾಟನೆ ಮಾಡಿದೆ ಎಂದು ಹೇಳಿಕೆ ನೀಡಿದರೆ, ಹಿಂದೂಗಳ ಧಾರ್ಮಿಕ ಭಾವನೆಗೆ ಉಂಟಾಗುವ ಧಕ್ಕೆಗೆ ಹೊಣೆ ಯಾರು?’ ಎಂದು ಅವರು ಪ್ರಶ್ನಿಸಿದರು.

‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಇದೇ ಶಿವಕುಮಾರ್ ಕನಕಪುರ ತಾಲ್ಲೂಕಿನ ನಲ್ಲಹಳ್ಳಿ ಗ್ರಾಮದಲ್ಲಿರುವ ಮುನೇಶ್ವರ ಬೆಟ್ಟದಲ್ಲಿ ವಿಶ್ವದ ಅತಿ ಎತ್ತರದ ಏಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿದ್ದರು.  ಮುನೇಶ್ವರ ಬೆಟ್ಟವೇನು ಅವರ ಪಿತ್ರಾರ್ಜಿತ ಆಸ್ತಿಯೇ? ಎಂದು ಪ್ರಶ್ನಿಸಿದರು.

ಸಂಘಟನೆಯ ಪದಾಧಿಕಾರಿಗಳಾದ ರಘು ಮಂಗಳವಾರಪೇಟೆ, ಎಂ.ಪಿ. ಆನಂದ್ ಕುಮಾರ್, ಶ್ರೀಹರಿ, ವಡ್ಡರಹಳ್ಳಿ ಹನುಮಂತು, ಶ್ರೀನಿವಾಸ್, ಚಿದಾನಂದ್, ಸಂದೀಪ್, ಸುರೇಶ್, ರಾಮಕೃಷ್ಣ, ನಿಸರ್ಗ ನಾಗರೀಕ ಸೇವಾ ಸಮಿತಿಯ ಪುಟ್ಟಸ್ವಾಮಿಗೌಡ, ಎ.ವಿ. ಮದನ್, ಮಾಯಿಗೇಗೌಡ, ಬಸವರಾಜ್, ಮಾಸ್ಟರ್ ನಾಗಪ್ಪ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.