ADVERTISEMENT

ರಾಮನಗರ: ಮುಖ್ಯಮಂತ್ರಿ‌ ಬೊಮ್ಮಾಯಿ ಕಾರ್ಯಕ್ರಮಕ್ಕೆ ಡಿಕೆಶಿ ಬೆಂಬಲಿಗರಿಂದ ಅಡ್ಡಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 7:20 IST
Last Updated 3 ಜನವರಿ 2022, 7:20 IST
ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಅಡ್ಡಿ ವ್ಯಕ್ತಪಡಿಸುತ್ತಿರುವ ಡಿಕೆಶಿ ಬೆಂಬಲಿಗರು
ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಅಡ್ಡಿ ವ್ಯಕ್ತಪಡಿಸುತ್ತಿರುವ ಡಿಕೆಶಿ ಬೆಂಬಲಿಗರು   

ರಾಮನಗರ: ಇಲ್ಲಿನ‌ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ನಡೆದಿರುವ ಕಾರ್ಯಕ್ರಮಕ್ಕೆ ದಲಿತ ಮುಖಂಡರು‌ ಹಾಗೂ ಕಾಂಗ್ರೆಸ್ ಕಾರ್ಯಕರ್ತರು‌‌ ಅಡ್ಡಿಪಡಿಸಿದ್ದಾರೆ.

ಅಂಬೇಡ್ಕರ್ ಹಾಗೂ ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೇದಿಕೆಗೆ ಆಗಮಿಸುತ್ತಿದ್ದಂತೆ ಕೆಲವರು ಡಿ.ಕೆ. ಶಿವಕುಮಾರ್ ಪರವಾಗಿ ಘೋಷಣೆ‌‌ ಕೂಗಿದರು. ಹಾಗೆಯೇ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಇಲ್ಲಿ ಈ ಎರಡು ಪ್ರತಿಮೆಗಳ ನಿರ್ಮಾಣಕ್ಕೆ ಡಿ.ಕೆ. ಶಿವಕುಮಾರ್ ಅವರ ಶ್ರಮ ಹೆಚ್ಚಿದೆ. ಆದಾಗ್ಯೂ‌ ಕಾರ್ಯಕ್ರಮಕ್ಕೆ ಅವರನ್ನು ಗೌರವ ಪೂರ್ಣವಾಗಿ ಆಹ್ವಾನಿಸಿಲ್ಲ. ಜಿಲ್ಲೆಯ ದಲಿತ ಮುಖಂಡರನ್ನೂ ಕಾಟಾಚಾರಕ್ಕೆ ಎಂಬಂತೆ ಕರೆಯಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ADVERTISEMENT

ನಂತರ ಕಾರ್ಯಕ್ರಮದ ವೇದಿಕೆ ಏರಿದ ಪ್ರತಿಭಟನಾಕಾರರು ಅಲ್ಲಿಯೇ ಧಿಕ್ಕಾರ ಕೂಗಿದರು. ಈ ಸಂದರ್ಭ ಮುಖ್ಯಮಂತ್ರಿಗಳು ಮೌನವಾದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸಂಸದ ಡಿ.ಕೆ.‌ ಸುರೇಶ್ ' ನಮ್ಮ ನೋವನ್ನು ಈಗಾಗಲೇ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ. ಆದರೆ ಮುಖ್ಯಮಂತ್ರಿ‌ ಆದ ಬಳಿಕ ಬೊಮ್ಮಾಯಿ ಮೊದಲ ಬಾರಿಗೆ ನಮ್ಮ ಜಿಲ್ಲೆಗೆ ಬಂದಿದ್ದಾರೆ. ಹೀಗಾಗಿ‌ ಅವರಿಗೆ ಅಗೌರವ ತೋರುವುದು ಬೇಡ' ಎಂದು ಸಮಾಧಾನ ಪಡಿಸಿದರು.‌ ನಂತರ ಪ್ರತಿಭಟನಾಕಾರರು ಅಲ್ಲಿಂದ ತೆರಳಿದರು.

ಇದಾದ ಬಳಿಕ ಬಿಜೆಪಿ‌ ಕಾರ್ಯಕರ್ತರು ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸರ್ಕಾರದ ಪರವಾಗಿ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.