ADVERTISEMENT

ಐಜೂರಿನಲ್ಲಿ ರಾತ್ರಿ ಓಡಾಡಿದ ಕರಡಿ

​ಪ್ರಜಾವಾಣಿ ವಾರ್ತೆ
Published 2 ಮೇ 2024, 19:28 IST
Last Updated 2 ಮೇ 2024, 19:28 IST
ರಾಮನಗರದ ಐಜೂರಿನಲ್ಲಿ ರಾತ್ರಿ ಕಾಣಿಸಿಕೊಂಡ ಕರಡಿ
ರಾಮನಗರದ ಐಜೂರಿನಲ್ಲಿ ರಾತ್ರಿ ಕಾಣಿಸಿಕೊಂಡ ಕರಡಿ   

ರಾಮನಗರ: ನಗರದ ಐಜೂರಿನ ಜನವಸತಿ ಪ್ರದೇಶದಲ್ಲಿ ಮೂರು ದಿನಗಳ ಹಿಂದೆ ಕರಡಿಯೊಂದು ರಾತ್ರಿ ನಿರ್ಭೀತಿಯಿಂದ ಓಡಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  

ಏ. 30ರಂದು ರಾತ್ರಿ ಸುಮಾರು 11.30ರಿಂದ 12 ಗಂಟೆ ಅವಧಿಯಲ್ಲಿ ಜನವಸತಿ ಪ್ರದೇಶ ಪ್ರವೇಶಿಸಿದ ಕರಡಿ ರಸ್ತೆಯಲ್ಲಿ  ಓಡಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. 

ಕರಡಿಯನ್ನು ಕಂಡು ಬೀದಿನಾಯಿಗಳು ಬೊಗಳ ತೊಡಗಿದವು. ಇದರಿಂದ ಹೆದರಿ ಕರಡಿ ಓಡಲಾರಂಭಿಸಿದೆ. ನಾಯಿಗಳು ಕೆಲ ದೂರ ಅದನ್ನು ಹಿಂಬಾಲಿಸಿದಾಗ ವಸತಿ ಪ್ರದೇಶದಂಚಿನಲ್ಲಿ ಓಡಿ ಮರೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

ಐಜೂರು ಗುಡ್ಡದಾಚೆಗಿರುವ ಅರಣ್ಯ ಪ್ರದೇಶದಿಂದ ಕರಡಿ ಆಹಾರ ಅರಸಿಕೊಂಡು ಐಜೂರಿನ ಜನವಸತಿ ಪ್ರದೇಶ ಪ್ರವೇಶಿಸಿದೆ. ಅದನ್ನು ಗಮನಿಸಿರುವ ಕೆಲ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದ್ದಾರೆ. ನಾಯಿಗಳು ಬೊಗಳ ತೊಡಗಿದಾಗ ಗಾಬರಿಗೊಂಡು ಮತ್ತೆ ಅರಣ್ಯದತ್ತ ಓಡಿದ್ದು ಯಾರಿಗೂ ತೊಂದರೆಯಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಕರಡಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಭಯ ಉಂಟುಮಾಡಿದೆ. ಕಾಡು ಪ್ರಾಣಿಗಳು ಜನವಸತಿ ಪ್ರದೇಶ ಪ್ರವೇಶಿಸಿದಾಗ ಏನಾದರೂ ತೊಂದರೆಯಾದರೆ ಯಾರು ಹೊಣೆ? ಕರಡಿ ಐಜೂರು ಪಕ್ಕದ ಗುಡ್ಡದಲ್ಲಿ ಇರುವ ಸಾಧ್ಯತೆ ಇದ್ದು, ಮತ್ತೆ ಅದು ಜನವಸತಿಯತ್ತ ಬಾರದಂತೆ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.