ADVERTISEMENT

ರಾಮನಗರದಲ್ಲಿ ಮುಂದುವರಿದ ಜೆಡಿಎಸ್‌ ಬಿಗಿಹಿಡಿತ

ಬಿಡದಿ ರೈತ ಸೇವಾ ಸಹಕಾರ ಸಂಘಕ್ಕೆ ಜೆಡಿಎಸ್‌ನ 8 ಮಂದಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 15:43 IST
Last Updated 4 ಫೆಬ್ರುವರಿ 2020, 15:43 IST
   

ಬಿಡದಿ: ಬಿಡದಿ ರೈತ ಸೇವಾ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಜೆ.ಡಿ.ಎಸ್ ಬೆಂಬಲಿತ 8 ಅಭ್ಯರ್ಥಿಗಳು ಮತ್ತು ಕಾಂಗ್ರೆಸ್‌ ಬೆಂಬಲಿತ ನಾಲ್ವರು ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಜೆ.ಡಿ.ಎಸ್ ಬೆಂಬಲಿತರೇ ಮೇಲುಗೈ ಸಾಧಿಸಿದ್ದಾರೆ.

ಶಾಸಕ ಎ.ಮಂಜುನಾಥ್ ಪತ್ರಕರ್ತರೊಂದಿಗೆ ಮಾತನಾಡಿದರು

12 ನಿರ್ದೇಶಕರ ಸ್ಥಾನಕ್ಕೆ 29 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಸಾಲಗಾರರಲ್ಲದ ಮತ್ತು ಮಹಿಳಾ ಮೀಸಲು ಹಾಗೂ ಸಾಮಾನ್ಯ ಕ್ಷೇತ್ರಗಳಿಗೆ ತೀವ್ರ ಪೈಪೋಟಿ ನಡೆದಿತ್ತು.

ಶಾಸಕ ಎ.ಮಂಜುನಾಥ್ ಜಯ ಪಡೆದ ಸ್ಪರ್ಧಿಗಳನ್ನು ಸೋಮವಾರ ಅಭಿನಂದಿಸಿದರು. ಸುದ್ದಿಗಾರರ ಜತೆ ಮಾತನಾಡಿ, ‘ಸಂಘವು ಮೊದಲಿನಿಂದಲೂ ಜೆ.ಡಿ.ಎಸ್ ಭದ್ರಕೋಟೆಯಾಗಿದೆ. ಈ ಭಾಗದ ಪ್ರಮುಖ ನಾಯಕ ಸಿ.ಬೋರಯ್ಯ ಅವರ ಪುತ್ರರಾದ ಚಂದ್ರಣ್ಣ ಅವರ ಮಾರ್ಗದರ್ಶನದಲ್ಲಿ ನಮ್ಮವರು ಸ್ಪರ್ಧಿಸಿದ್ದರು. ಗೆಲುವಿನಲ್ಲಿ ಜೆ.ಡಿ.ಎಸ್ ಮುಖಂಡರ ಕಾರ್ಯಕರ್ತರ ಶ್ರಮ ಅಡಗಿದೆ’ ಎಂದರು.

ADVERTISEMENT

‘ಕಾಂಗ್ರೆಸ್‌ ಬೆಂಬಲ ಪಡೆದು ಸ್ಪರ್ಧಿಸಿ ಜಯ ಗಳಿಸಿದವರೂ ನಮ್ಮವರೇ ಆಗಿದ್ದಾರೆ. ಸುಲಲಿತವಾಗಿ ಆಡಳಿತ ನಡೆಸಿ ರೈತರ ಶ್ರೇಯೋಭಿವೃದ್ಧಿಗೆ ನೂತನ ನಿರ್ದೇಶಕರು ಶ್ರಮಿಸಲಿದ್ದಾರೆ’ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

‘ಕಾಂಗ್ರೆಸ್‌- ಜೆ.ಡಿ.ಎಸ್ ಹೊಂದಾಣಿಕೆ ಮೊದಲಿನಿಂದಲೂ ನಡೆದಿಲ್ಲ. ಕಾಂಗ್ರೆಸ್‌ ಮೂರು ಸ್ಥಾನವನ್ನು ಬಿಟ್ಟು ಕೊಡಿ ಎಂಬ ಪ್ರಸ್ತಾಪವನ್ನು ಇಟ್ಟಿತ್ತು. ನಮ್ಮ ಕಾರ್ಯಕರ್ತರು ಇದಕ್ಕೆ ಒಪ್ಪದೇ ಎಲ್ಲ ಸ್ಥಾನಗಳಿಗೂ ಸ್ಪರ್ಧಿಸಿ 8 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ. 540 ಅನರ್ಹ ಮತಗಳಿಂದಾಗಿ ನಾಲ್ವರು ಸೋಲು ಕಂಡಿದ್ದಾರೆ. ಇವು ಸರಿಯಾಗಿ ಚಲಾವಣೆ ಆಗಿದ್ದರೆ ಎಲ್ಲ ಸ್ಥಾನಗಳು ನಮ್ಮ ಪಕ್ಷದ ಪಾಲಾಗುತ್ತಿದ್ದವು’ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ್, ಜೆ.ಡಿ.ಎಸ್ ಮುಖಂಡರಾದ ಸಿ.ಉಮೇಶ್, ಸೋಮೇಗೌಡ, ಮುನಿತಿಮ್ಮಣ್ಣ, ಎಚ್.ಎಸ್ ಯೋಗಾನಂದ, ದೇವರಾಜು, ರಾಮಕೃಷ್ಣಯ್ಯ, ಶೇಷಪ್ಪ, ರವಿಕುಮಾರ್, ಹರೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.