ಮಾಗಡಿ: ವಿವಿಧ ಜಿಲ್ಲೆಗಳಲ್ಲಿ ಮೋಟಾರ್ ಬೈಕ್ ಮತ್ತು ಚಿನ್ನದ ಸರ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ವಿಠಲೇನಹಳ್ಳಿಯ ಸಂಜಯ್ಕುಮಾರ್ (23), ಕೆಬ್ಬಳ್ಳಿಯ ಕೀರ್ತಿ(23), ಬನ್ನಿಕುಪ್ಪೆಯ ಆನಂದ ಗಿರಿ(20) ಎಂದು ಗುರುತಿಸಲಾಗಿದೆ. ಆರೋಪಿತರಿಂದ ಮೂರು ಬೈಕ್ ಮತ್ತು ಎರಡು ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳು ಒಟ್ಟು ₹4.03 ಲಕ್ಷ ಬೆಲೆಬಾಳುತ್ತವೆ. ಒಟ್ಟು 5 ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.
ಕೆಂಪೇಗೌಡ ಸರ್ಕಲ್ನಲ್ಲಿ ಪಿಎಸ್ಐ ಟಿ.ವೆಂಕಟೇಶ್ ಮತ್ತು ಸಿಬ್ಬಂದಿ ವಾಹನ ತಪಾಸಣೆ ಮಾಡುತ್ತಿದ್ದಾಗ ಖಾಸಗಿ ಬಸ್ ನಿಲ್ದಾಣದ ಕಡೆಯಿಂದ ಮೋಟಾರ್ ಸೈಕಲ್ನಲ್ಲಿ ಇಬ್ಬರು ಬಂದಿದ್ದು, ಅವರನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಈ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಹೇಳಿದರು.
ಡಿವೈಎಸ್ಪಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ರವಿಕುಮಾರ್, ಪಿಎಸ್ಐ ಟಿ.ವೆಂಕಟೇಶ್, ಹೆಡ್ ಕಾನ್ಸ್ಟೆಬಲ್ ಮಂಜುನಾಥ, ಕಾನ್ಸ್ಟೆಬಲ್ಗಳಾದ ಬೀರಪ್ಪ, ಅಭಿಷೇಕ್, ರಾಜಣ್ಣ, ಲೋಹಿತ್ ಕುಮಾರ್, ಮಂಜುನಾಥ, ಅಪ್ಪಾಸಾಬ್, ಸಿರಿಗಿರಿ, ಕಂಬೇಗೌಡ ತಂಡವು ಈ ಕಾರ್ಯಾಚರಣೆ ನಡೆಸಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಶೆಟ್ಟಿ ತಂಡವನ್ನು ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.