ಕನಕಪುರ: ದನಗಳನ್ನು ಮೇಯಿಸುತ್ತಿದ್ದಾಗ ತಪ್ಪಿಸಿಕೊಂಡ ಹಸುವನ್ನು ಹುಡುಕಲು ಹೋಗಿದ್ದ ದನಗಾಯಿಗೆ ಕಾಡೆಮ್ಮೆಯು ತನ್ನ ಕೋಡಿನಿಂದ ತಿವಿದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಸಂಗಮದ ಕೊಗ್ಗೆದೊಡ್ಡಿಯಲ್ಲಿ ನಡೆದಿದೆ.
ಉಯ್ಯಂಬಳ್ಳಿ ಹೋಬಳಿ ಕೊಗ್ಗೆದೊಡ್ಡಿ ಗ್ರಾಮದ ಚೆನ್ನಪ್ಪ (60) ಗಾಯಗೊಂಡಿರುವ ವ್ಯಕ್ತಿಯಾಗಿದ್ದಾರೆ. ಇವರು ಕಾಡಿನಲ್ಲಿ ದನಗಳನ್ನು ಮೇಯಿಸುತ್ತಿದ್ದರು. ತಪ್ಪಿಸಿಕೊಂಡಿದ್ದ ಹಸುವನ್ನು ಮೂರುದಿನದಿಂದ ಹುಡುಕಾಡುತ್ತಿದ್ದರು. ಭಾನುವಾರ ಮತ್ತೆ ತಪ್ಪಿಸಿಕೊಂಡಿದ್ದ ಜಾಗದಲ್ಲಿ ಹುಡುಕಾಡುತ್ತಿದ್ದಾಗ ಕೊಗ್ಗೆದೊಡ್ಡಿ ಸಮೀಪದ ಹೊಸ್ತಿಹಳ್ಳದ ಬಳಿ ಕಾಡೆಮ್ಮೆಯು ಹಿಂಬದಿಯಿಂದ ತನ್ನ ಕೋಡಿನಲ್ಲಿ ತಿವಿದಿದೆ. ಕಾಡೆಮ್ಮೆ ತಿವಿದ ರಬಸಕ್ಕೆ ಚೆನ್ನಪ್ಪ ಹಳ್ಳಕ್ಕೆ ಬಿದ್ದಿದ್ದಾರೆ.
ಕಾಡೆಮ್ಮೆಯಿಂದ ಗಾಯಗೊಂಡು ಚೀರಾಡುತ್ತಿದ್ದ ಚೆನ್ನಪ್ಪನನ್ನು ಗಮನಿಸಿದ ಅಕ್ಕಪಕ್ಕದಲ್ಲಿ ದನ ಮೇಯಿಸುತ್ತಿದ್ದವರು ಅವರನ್ನು ರಕ್ಷಣೆ ಮಾಡಿದ್ದಾರೆ. ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚೆನ್ನಪ್ಪ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.