ರಾಮನಗರ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಬಿಜೆಪಿ ಕಾರ್ಯಕರ್ತರು ಜಿಲ್ಲೆಯಾದ್ಯಂತ ಗುರುವಾರ ವಿಭಿನ್ನವಾಗಿ ಆಚರಿಸಿದರು.
ರಾಮನಗರದಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಸಿ ನೆಟ್ಟು, ಸಿಹಿ ವಿತರಿಸಿದರು. ಮತ್ತೊಂದೆಡೆ ಗಣ ಹೋಮದ ಮೂಲಕ ಪ್ರಾರ್ಥಿಸಲಾಯಿತು. ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಕೆಂಪೇಗೌಡನ ದೊಡ್ಡಿಯಲ್ಲಿ ಇರುವ ಚಾಮುಂಡೇಶ್ವರಿ ದೇವಾಲಯದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಗಣ ಹೋಮ ನಡೆಯಿತು. ಮಹಿಳಾ ಮೋರ್ಚಾ ನಗರ ಘಟಕದ ಅಧ್ಯಕ್ಷೆ ಪುಷ್ಪಲತಾ ಮಾತನಾಡಿ "ಮೋದಿ ಅವರ ಸಾರಥ್ಯದಲ್ಲಿ ಭಾರತ ವಿಶ್ವದ ಗಮನ ಸೆಳೆಯುತ್ತಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಯುವ ಸಮುದಾಯಕ್ಕೆ ಪ್ರೋತ್ಸಾಹ ದೊರೆಯುತ್ತಿದೆ. ಆತ್ಮ ನಿರ್ಭರ ಭಾರತ ಸಹ ಉಪಯುಕ್ತ ಯೋಜನೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜ್, ಪ್ರಧಾನ ಕಾರ್ಯದರ್ಶಿ ರುದ್ರದೇವರು, ಖಜಾಂಚಿ ಮಲ್ಲೇಶ, ನಗರ ಬಿಜೆಪಿ ಘಟಕದ ಅಧ್ಯಕ್ಷ ಪಿ.ಶಿವಾನಂದ, ಮಾಧ್ಯಮ ಪ್ರಮುಖ್ ಚಂದ್ರಶೇಖರ ರೆಡ್ಡಿ, ಮುಖಂಡರಾದ ಟಿ.ಕೆ.ಶಾಂತಪ್ಪ, ರಂಗಸ್ವಾಮಿ, ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ವೀಣಾ, ಪ್ರಮುಖರಾದ ನಾಗಮ್ಮ, ರಾಧಾ, ಲಕ್ಷ್ಮಿ, ಮಂಜುಳಾ, ಸಂಗೀತಾ, ರಂಜಿತಾ ಇದ್ದರು.
ರಾಮದೇವರ ಬೆಟ್ಟದ ರಸ್ತೆಯಲ್ಲಿರುವ ಆಘಾ ಖಾನ್ ಲೇಔಟ್ನಲ್ಲಿ ಪಕ್ಷದ ಕಾರ್ಯಕರ್ತರು 70 ವಿವಿಧ ಬಗೆಯ ಸಸಿಗಳನ್ನು ನೆಟ್ಟರು. "ಸ್ವಚ್ಚ ಭಾರತ ಅಭಿಯಾನದ ಮೂಲಕ ಪರಿಸರ ಪ್ರೇಮ ಬೆಳೆಸಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಅವರ 70ನೇ ಹುಟ್ಟು ಹಬ್ಬದ ಅಂಗವಾಗಿ 70 ಸಸಿಗಳನ್ನು ನೆಡಲಾಗಿದೆ ಎಂದು ಬಿಜೆಪಿ ಘಟಕದ ಅಧ್ಯಕ್ಷ ಪಿ.ಶಿವಾನಂದ ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿಯೂ ಕಾರ್ಯಕರ್ತರು ಸಸಿ ನೆಟ್ಟು, ಸಿಹಿ ವಿತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.