ಮಾಗಡಿ: ‘ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನವಾದುದು’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಲತಾ ಆರ್.ಕುಲಕರ್ಣಿ ತಿಳಿಸಿದರು.
ಚಂದೂರಾಯನ ಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ‘ವಿಶ್ವ ಸ್ತನ್ಯಪಾನ ಸಪ್ತಾಹ 2019 ಕಾರ್ಯಕ್ರಮ’ಕ್ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ತಾಯಿಯ ಹಾಲಿನಲ್ಲಿ ಮಗುವಿನ ಬೆಳವಣಿಗೆ ಅಗತ್ಯವಿರುವ ಅವಶ್ಯಕ ಪೋಷಕಾಂಶಗಳು ಸುಲಭವಾಗಿ ಜೀರ್ಣವಾಗುವ ರೂಪದಲ್ಲಿ ದೊರೆಯುತ್ತದೆ. ತಾಯಿಯ ಹಾಲು ನಿಸರ್ಗದತ್ತ ಮತ್ತು ಸಂರಕ್ಷಿತವಾದದ್ದು. ಮಗುವಿಗೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ ಮಗುವಿನ ಆರೋಗ್ಯವನ್ನು ಕಾಪಾಡುತ್ತದೆ’ ಎಂದು ಹೇಳಿದರು.
‘ಮಗು ಜನಿಸಿದ ಆರು ತಿಂಗಳವರೆಗೆ ತಾಯಿಯ ಹಾಲು ಮಗುವಿನ ಪರಿಪೂರ್ಣ ಬೆಳವಣಿಗೆಗೆ ಅಗತ್ಯವಾದ ಆಹಾರ. ತಾಯಿ ಉತ್ತಮ ಪೌಷ್ಟಿಕ ಆಹಾರ ಸೇವನೆ ಜೊತೆಗೆ ಉಲ್ಲಾಸಮಯ ಪರಿಸರದಲ್ಲಿ ಮಗುವಿಗೆ ಹಾಲುಣಿಸಿದರೆ ಹಾಲು ಉತ್ಪಾದನೆ ಹೆಚ್ಚಾಗುವುದರ ಜೊತೆಗೆ ಮಗು ಆರೋಗ್ಯವಾಗಿರುತ್ತದೆ’ ಎಂದು ತಿಳಿಸಿದರು.
‘ಮಗುವಿಗೆ ತಾಯಿ ನೀಡುವ ಪ್ರಥಮ ಉಡುಗೊರೆಯಾಗಿದ್ದು ಮಗುವಿಗೆ ಆರೋಗ್ಯಕರ ಜೀವನ ಪಡೆಯಲು ಸಾದ್ಯವಾಗುತ್ತದೆ. ಇದು ನವಜಾತ ಶಿಶುವಿನಲ್ಲಿ ರೋಗ ನಿರೋಧಕತೆಗೆ ಚಾಲನೆ ನೀಡುತ್ತದೆ ಹಾಗೂ ಮಗುವಿನ ಪರಿಪೂರ್ಣ ಬೆಳವಣಿಗೆಗೆ ಅತ್ಯಗತ್ಯವಾದುದು’ ಎಂದರು.
‘ಶಿಶುವು ಜನಿಸಿದ ನಂತರ ಶ್ರವಿಸುವ ಮೊದಲ ಹಳದಿ ಬಣ್ಣದ ಹಾಲು ಕೊಲೆಸ್ಟ್ರಮ್ ಮಗುವಿಗೆ ಅಮೃತಕ್ಕೆ ಸಮಾನ, ಜೀವಿತಾವಧಿಯಲ್ಲಿ ಮತ್ತೆಂದೂ ಸಿಗದ ದಿವ್ಯಜೌಷದ. ಹಿಂದಿನ ದಿನಗಳಲ್ಲಿ ಸ್ತನ್ಯಪಾನ ಬಹಳ ರೂಡಿಯಲ್ಲಿತ್ತು, ಆಧುನಿಕತೆ ಬೆಳೆದಂತೆ ಹಾಗೂ ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚಾದಂತೆ ಸ್ತನ್ಯಪಾನವನ್ನು ಕಡೆಗಣಿಸಲಾಗುತ್ತಿದೆ. ಮಗುವಿಗೆ ನಿಜವಾದ ಪೌಷ್ಟಿಕ ಆಹಾರವೆಂದರೆ ತಾಯಿಯ ಹಾಲು, ಎದೆ ಹಾಲಿನ ಪೌಷ್ಠಿಕತೆ ಕಾಪಾಡಲು ತಾಯಂದಿರು ಉತ್ತಮ ಹಾಗೂ ವಿಷಾಣು ಮುಕ್ತ ಆಹಾರ ಸೇವನೆ ಮಾಡಬೇಕು’ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.