ಮಾಗಡಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಮತ್ತು ಬಿಜೆಪಿ ಯುವ ನಾಯಕ ಬಿ.ವೈ. ವಿಜಯೇಂದ್ರ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗುವುದು ಖಚಿತ’ ಎಂದು ಕೆಆರ್ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಭವಿಷ್ಯ ನುಡಿದಿದ್ದಾರೆ.
ಇಲ್ಲಿಯ ಸರ್ವೋದಯ ಶಾಲಾ ಆವರಣದಲ್ಲಿ ಭಾನುವಾರ ನಡೆದ ವೀರಶೈವ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ವೀರಶೈವ–ಲಿಂಗಾಯಿತರು ಬುದ್ದಿವಂತ ಸಮಾಜ. ಯುವಕರು ಧೈರ್ಯದಿಂದ ಮುನ್ನುಗ್ಗಬೇಕು. ನಮ್ಮ ಸಮಾಜದ ಯುವಕರು ಬಿ.ಎಸ್.ಯಡಿಯೂರಪ್ಪ, ವಿ.ಸೋಮಣ್ಣ ಅವರನ್ನು ಆದರ್ಶವಾಗಿಟ್ಟುಕೊಂಡು ನೂರಾರು ಸಂಖ್ಯೆಯಲ್ಲಿ ಜನನಾಯಕರಾಗಿ ಹೊರಹೊಮ್ಮಬೇಕು’ ಎಂದರು.
‘ಕೆಆರ್ಐಡಿಎಲ್ ಅನುದಾನವನ್ನು ಮಠಮಾನ್ಯಗಳಿಗೆ ಮತ್ತು ಸಮುದಾಯ ಭವನ ಕಟ್ಟಲು ನೀಡುತ್ತೇನೆ. ಕಂಚುಗಲ್ ಬಂಡೇಮಠ, ಗದ್ದುಗೆ ಮಠಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಿದ್ಧಗಂಗಾ ಶ್ರೀಗಳ ಜನ್ಮಸ್ಥಳ ವೀರಾಪುರದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಪುತ್ಥಳಿ ಸ್ಥಾಪನೆಗೆ ಇದ್ದ ತೊಡಕುಗಳು ಬಗೆಹರಿದಿವೆ. ಶೀಘ್ರ ಪುತ್ಥಳಿ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದಲೇ ಉದ್ಘಾಟನೆ ಮಾಡಿಸಲಾಗುವುದು’ ಎಂದರು.
ಸೊಸೈಟಿ ಅಧ್ಯಕ್ಷ ಶಿವರುದ್ರಯ್ಯ ಮಾತನಾಡಿ, ‘ನಮ್ಮ ಸಮಾಜದ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸೊಸೈಟಿ ಅನುಕೂಲ ಮಾಡಿದೆ. ಯುವಕರು ಚಟಗಳ ದಾಸರಾಗದೆ, ಲಿಂಗವಂತರಾಗಬೇಕು. ವಾಹನ ಮತ್ತು ಕಟ್ಟಡ ಕಟ್ಟಲು ಸಾಲ ನೀಡಲಾಗುವುದು’ ಎಂದರು.
ಗದ್ದುಗೆ ಮಠದ ಮಹಂತಸ್ವಾಮಿ ಮಾತನಾಡಿ, ‘ಸಕಲರಿಗೂ ಲೇಸನ್ನೇ ಬಯಸಿದ ಸಮಾಜ ನಮ್ಮದು. ಸಂಸ್ಕಾರವಂತ ಮಕ್ಕಳೇ ವೀರಶೈವ ಲಿಂಗಾಯಿತ ಸಮಾಜದ ಆಸ್ತಿ.ಭಸ್ಮ ಧಾರಣೆ ಮತ್ತುಲಿಂಗ ಧಾರಣೆ ಮರೆಯಬಾರದು’ ಎಂದರು.
ಕೆ.ಬಿ.ಮಠದ ಬಸವಲಿಂಗ ಸ್ವಾಮಿ, ವೀರಶೈವ ಮಂಡಳಿ ಅಧ್ಯಕ್ಷ ರುದ್ರಮೂರ್ತಿ, ಸೊಸೈಟಿ ಉಪಾಧ್ಯಕ್ಷ ಪಿ.ಗಂಗಾಧರಯ್ಯ, ನಿರ್ದೇಶಕರಾದ ಹೊನ್ನಾಪುರದ ಶಿವಪ್ರಸಾದ್, ಜಿ.ಡಿ.ಶಿವರುದ್ರಯ್ಯ, ಎನ್.ಆರ್.ಶರ್ಮ, ಉಡುಕುಂಟೆ ಪ್ರಕಾಶ್, ಅನಿಲ್ಕುಮಾರ್, ಎಂ.ಎಸ್.ಸಿದ್ದಲಿಂಗೇಶ್ವರ್, ಶಿವರಾಜು, ಪ್ರೇಮ್ ಕುಮಾರ್, ಬಸವರಾಜು, ಗಂಗಾಂಬಿಕೆ, ಕಮಲಮ್ಮ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ತೋಂಟಾರಾಧ್ಯ, ಗುಡೇಮಾರನಹಳ್ಳಿ ಚಂದ್ರಶೇಖರ್, ಮುದ್ದುವೀರಪ್ಪ, ಮಹಂತೇಶ್, ಗುಣಶೇಖರ್, ಹಲಸಬೆಲೆ ಬಸವರಾಜು ಹಾಗೂ ಷೇರುದಾರರು ಇದ್ದರು. ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.