ಮಾಗಡಿ: ಶ್ರಮಪಟ್ಟು ವಿದ್ಯಾಭ್ಯಾಸ ಮಾಡುವುದರ ಜತೆಗೆ ಸೇವಾಭಾವನೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಕೆಂಚಪ್ಪ ತಿಳಿಸಿದರು.
ಬಾಚೇನಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ ‘ರಾಷ್ಟ್ರೀಯ ಸೇವಾ ಯೋಜನೆ’ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಸೇವೆಯು ದೇವರ ಪೂಜೆಗೆ ಸಮ ಎಂಬುದನ್ನು ಶಿಕ್ಷಕರು ಕಲಿಸಿಕೊಡಬೇಕು ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾಂತರಾಜು ಮಾತನಾಡಿ, ವಿದ್ಯೆ ಅನನ್ಯವಾದ ಸಂಪತ್ತು. ಸದಾ ಚಟುವಟಿಕೆಯಿಂದ ಕೂಡಿರುವುದು ಬುದ್ಧಿವಂತರ ಲಕ್ಷಣ. ಓದುವುದರ ಜತೆಗೆ ಪೋಷಕರಿಗೆ ನೆರವಾಗಬೇಕು. ಕಷ್ಟದ ಅನುಭವವಾದಾಗ ಅದು ಮುಂದಿನ ಬದುಕಿಗೆ ಪ್ರೇರಣೆಯಾಗಲಿದೆ ಎಂದರು.
ಮುಖ್ಯಶಿಕ್ಷಕಿ ಜಯಮ್ಮ ಅಧ್ಯಕ್ಷತೆವಹಿಸಿದ್ದರು. ವಿಜ್ಞಾನ ಶಿಕ್ಷಕ ಮೃತ್ಯುಂಜಯ, ಎನ್ಎಸ್ಎಸ್ ಘಟಕದ ಮೇಲ್ವಿಚಾರಕ ಹನುಮಂತೇಗೌಡ ಎಲ್., ಸಂಜಯ ಕುಮಾರ್ ರಾಠೋಡ್, ಅನ್ನಪೂರ್ಣ ಪಾಟೀಲ್ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವದ ಬಗ್ಗೆ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಮಕ್ಕಳು , ಗ್ರಾಮಸ್ಥರು ಮತ್ತು ಶಿಕ್ಷಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.