
ಸಾಂದರ್ಭಿಕ ಚಿತ್ರ
ಬಿಡದಿ (ರಾಮನಗರ): ಸಿಮೆಂಟ್ ಮಿಕ್ಸಿಂಗ್ ಮಾಡುವ ಯಂತ್ರಕ್ಕೆ ಸಿಲುಕಿ ಯಂತ್ರದ ಆಪರೇಟರ್ ಮೃತಪಟ್ಟಿರುವ ದುರ್ಘಟನೆ ಹೋಬಳಿಯ ಮಲ್ಲತ್ತಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.
ಬಿಹಾರದ ವಿಕಾಸ್ ಕುಮಾರ್ (27) ಯಂತ್ರದಲ್ಲಿ ಸಿಲುಕಿ ನರಕಯಾತೆ ಅನುಭವಿಸಿ ಮೃತಪಟ್ಟ ಕಾರ್ಮಿಕ.
ಘಟನೆಗೆ ಸಂಬಂಧಿಸಿದಂತೆ ಕಾರ್ಖಾನೆಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದ ಆರೋಪದ ಮೇಲೆ, ಶ್ರೀ ಅಂಬಿಕಾ ಸಿಮೆಂಟ್ ಹಾಲೋಬ್ಲಾಕ್ ಕಾರ್ಖಾನೆ ಮಾಲೀಕ ಸುರೇಶ್ ಹಾಗೂ ಮೇಸ್ತ್ರಿ ಸುರೇಶ್ ಮುರ್ಮು ವಿರುದ್ಧ ಬಿಡದಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಿ. 22ರಂದು ಸಂಜೆ 6.30ರ ಸುಮಾರಿಗೆ ವಿಕಾಸ್ ಕುಮಾರ್ ಅವರು ಸಿಮೆಂಟ್ ಮಿಕ್ಸಿಂಗ್ ಯಂತ್ರವನ್ನು ಆಪರೇಟ್ ಮಾಡುವಾಗ, ಅಚಾನಕ್ ಆಗಿ ಅವರ ಕೈ ಯಂತ್ರಕ್ಕೆ ಸಿಲುಕಿಕೊಂಡಿತು. ಬಿಡಿಸಿಕೊಳ್ಳಲು ಯತ್ನಿಸಲು ಮುಂದಾದಾಗ ಇಡೀ ದೇಹ ಯಂತ್ರದೊಳಗೆ ಸೇರಿಕೊಂಡು ಮುರ್ನಾಲ್ಕು ಸುತ್ತು ತಿರುಗಿ, ಇಡೀ ದೇಹ ಗಂಭೀರವಾಗಿ ಗಾಯಗೊಂಡು ರಕ್ತಸಿಕ್ತವಾಗಿದ್ದರಿಂದ ವಿಕಾಸ್ ಪ್ರಜ್ಞಾಹೀನರಾಗಿದ್ದಾರೆ.
ವಿಕಾಸ್ ಅವರು ಯಂತ್ರದೊಳಗೆ ಸಿಲುಕಿದ್ದನ್ನು ಗಮನಿಸಿದ ಕೂಡಲೇ ಸ್ಥಳದಲ್ಲಿದ್ದ ಸಹ ಕಾರ್ಮಿಕರಾದ ಮೋತಿ ಲಾಲ್, ಹೀರಾಲಾಲ್ ಹಾಗೂ ವಿಜಯ್ ಕೂಡಲೇ ಯಂತ್ರವನ್ನು ಆಫ್ ಮಾಡಿದ್ದಾರೆ. ಕೂಡಲೇ ಕಾರ್ಖಾನೆ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿ, ಸ್ಥಳಕ್ಕೆ ಆಂಬುಲೆನ್ಸ್ ಕಳಿಸುವಂತೆ ಕೋರಿದ್ದಾರೆ.
ಕೆಲ ಹೊತ್ತಿನ ನಂತರ ಸ್ಥಳಕ್ಕೆ ಬಂದ ಆಂಬುಲೆನ್ಸ್ನಲ್ಲಿ ವಿಕಾಸ್ ಅವರನ್ನು ಚಲ್ಲಘಟ್ಟ ಬಳಿ ಇರುವ ರಾಜರಾಜೇಶ್ವರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವಿಕಾಸ್ ಅವರನ್ನು ಪರೀಕ್ಷಿಸಿದ ವೈದ್ಯರು, ಆಸ್ಪತ್ರೆಗೆ ತರುವುದಕ್ಕೆ ಮುಂಚೆಯೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ ಕೊಡಲಾಯಿತು.
ಘಟನೆ ಕುರಿತು ವಿಕಾಸ್ ಅವರ ಸಂಬಂಧಿ ಕಾಮದೇವ್ ಯಾದವ್ ಅವರು ನೀಡಿದ ದೂರಿನ ಮೇರೆಗೆ ಕಾರ್ಖಾನೆ ಮಾಲೀಕ ಸುರೇಶ್ ಹಾಗೂ ಮೇಸ್ತ್ರಿ ಸುರೇಶ್ ಮುರ್ಮು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬಿಡಿದ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.