
ಚನ್ನಪಟ್ಟಣ: ತಾಲ್ಲೂಕಿನ ಕೋಡಂಬಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸ್ವಾಮಿ ವಿವೇಕಾನಂದರ ಕಂಚಿನ ಪುತ್ಥಳಿಯನ್ನು ಗುರುವಾರ ಅನಾವರಣ ಮಾಡಲಾಯಿತು.
ಜೆ. ಬ್ಯಾಡರಹಳ್ಳಿ ಗ್ರಾಮದ ಮಲ್ಲಾರಾಧ್ಯ ಅವರು ಕಾಲೇಜಿಗೆ ಸ್ವಾಮಿ ವಿವೇಕಾನಂದರ ಕಂಚಿನ ಪುತ್ಥಳಿಯನ್ನು ಉಚಿತವಾಗಿ ನೀಡಿದ್ದು, ಅವರ ನೇತೃತ್ವದಲ್ಲಿ ಅರ್ಚಕರು ಶಾಸ್ತ್ರೋಕ್ತವಾಗಿ ಪೂಜಾ ವಿಧಿವಿಧಾನ ನೆರವೇರಿಸಿ ಪುತ್ಥಳಿ ಅನಾವರಣಗೊಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಮಾದು ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಜನತೆಗೆ ಶಕ್ತಿ, ಶಿಸ್ತು ಮತ್ತು ಸ್ಫೂರ್ತಿಯ ಪ್ರತೀಕ. ಅವರ ಆದರ್ಶಗಳು ವಿದ್ಯಾರ್ಥಿಗಳ ಬದುಕಿನಲ್ಲಿ ದಾರಿದೀಪವಾಗಬೇಕು ಎಂದರು.
ಉಪನ್ಯಾಸಕ ಬಿ.ಪಿ. ಸುರೇಶ್, ಸ್ವಾಮಿ ವಿವೇಕಾನಂದ ಮತ್ತು ಯುವಜನತೆ ವಿಷಯ ಕುರಿತು ಉಪನ್ಯಾಸ ನೀಡಿ, ಸ್ವಾಮಿ ವಿವೇಕಾನಂದರು ಕೇವಲ ಐತಿಹಾಸಿಕ ವ್ಯಕ್ತಿಯಲ್ಲ. ಯುವಜನತೆ ಮತ್ತು ವಿದ್ಯಾರ್ಥಿಗಳ ಶಾಶ್ವತ ಪ್ರೇರಣೆ. ಅವರ `ಏಳಿರಿ, ಜಾಗೃತರಾಗಿ, ಗುರಿ ಸಾಧಿಸುವವರೆಗೂ ನಿಲ್ಲಬೇಡಿ' ಎಂಬ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಯುವಜನತೆ ಆತ್ಮವಿಶ್ವಾಸ, ರಾಷ್ಟ್ರಭಕ್ತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಡಾ. ಬಸವರಾಜು, ಉಪಾಧ್ಯಕ್ಷ ಲಿಂಗರಾಜಗೌಡ, ನಿರ್ದೇಶಕ ಪಟೇಲ್ ಶ್ರೀನಿವಾಸ, ಮಂಗಾಡಹಳ್ಳಿ ರಾಜಣ್ಣ, ಮುಖಂಡ ಕೆ.ಎಸ್. ನಾಗರಾಜು, ಕೆ.ಪಿ. ಮಹೇಂದ್ರ, ಶ್ಯಾನುಭೋಗನಹಳ್ಳಿ ರವಿ, ಸಿದ್ದಪ್ಪ, ಎಚ್.ವಿ. ವೆಂಕಟಲಕ್ಷ್ಮಿ, ಸುರೇಶ್ ನೇರಳೂರು, ಶಿಲ್ಪ, ಸೋಮಶೇಖರ್, ವಿನಯ್ ಕುಮಾರ್, ರಾಮಕೃಷ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.