
ಚನ್ನಪಟ್ಟಣ: ನಗರದ ಬಡಾಮಕಾನ್ ಅಖಿಲ್ ಷಾ ಖಾದ್ರಿ ದರ್ಗಾದ ಬಳಿಯ ನ್ಯೂ ಮಕಾನ್ನಲ್ಲಿ ಭಾನುವಾರ ಮಧ್ಯರಾತ್ರಿ ಬೆಂಕಿ ಹೊತ್ತಿಕೊಂಡು ಗ್ಯಾರೇಜ್ ಹಾಗೂ ಒಂದು ಕುಶನ್ ಸೀಟ್ ಅಂಗಡಿ ಸುಟ್ಟು ಭಸ್ಮವಾಗಿವೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ.
ಸೈಯದ್ ಜಿಲಾನ್ ಅವರಿ ಕಾರ್ ಗ್ಯಾರೇಜ್ ಹಾಗೂ ಇರ್ಫಾನ್ ಅವರ ಕುಶನ್ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಗ್ಯಾರೇಜ್ನಲ್ಲಿದ್ದ ವಾಹನ, ಕುಶನ್ ಅಂಗಡಿಯಲ್ಲಿದ್ದ ನೂರಾರು ಕುಶನ್ ಸೀಟು ಬೆಂಕಿಗೆ ಆಹುತಿಯಾಗಿವೆ. ₹ 5 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ ಎಂದು ಅಂದಾಜಿಸಲಾಗಿದೆ.
ಮಧ್ಯರಾತ್ರಿ 12ಕ್ಕೆ ಎರಡು ಅಂಗಡಿಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬರುವ ಹೊತ್ತಿಗೆ ಎರಡು ಅಂಗಡಿಗಳು ಭಾಗಶಃ ಸುಟ್ಟು ಭಸ್ಮವಾಗಿದ್ದವು.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಇತರ ಅಂಗಡಿಗಳಿಗೆ ಬೆಂಕಿ ವ್ಯಾಪಿಸುವುದನ್ನು ತಡೆಗಟ್ಟಿದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.