
ಚನ್ನಪಟ್ಟಣದ ಸಾತನೂರು ಸರ್ಕಲ್ ರಸ್ತೆಯಲ್ಲಿ ಗುಜರಿ ಅಂಗಡಿಗಳಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಆವರಿಸಿದ್ದ ದಟ್ಟ ಹೊಗೆ
ಚನ್ನಪಟ್ಟಣ: ನಗರದ ಸಾತನೂರು ಸರ್ಕಲ್ ಬಳಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಆರು ಗುಜರಿ ಅಂಗಡಿಗಳು ಸುಟ್ಟು ಭಸ್ಮವಾಗಿವೆ.
ಶನಿವಾರ ಮಧ್ಯಾಹ್ನ ಸಾತನೂರು ಕಡೆಗೆ ತೆರಳುವ ರಸ್ತೆಯಲ್ಲಿ ಇರುವ ಸಾಲು ಸಾಲು ಗುಜರಿ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತೀವ್ರತೆಯಿಂದ ಕ್ಷಣಾರ್ಧದಲ್ಲಿ ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಈ ರಸ್ತೆಯಲ್ಲಿ ದಟ್ಟ ಹೊಗೆ ವ್ಯಾಪಿಸಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಮುಂದೆ ಆಗಬಹುದಾದ ಅನಾಹುತ ತಡೆದರು. ಈ ಅಂಗಡಿಗಳು ಯಾರಿಗೆ ಸೇರಿದ್ದವು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಅಂಗಡಿಗಳಲ್ಲಿ ವಿವಿಧ ಮರಮುಟ್ಟು, ಗುಜರಿ ಸಾಮಗ್ರಿಗಳು ಇದ್ದವು ಎಂದು ತಿಳಿದು ಬಂದಿದೆ.
ಬೆಂಕಿ ಕೆನ್ನಾಲಿಗೆಗೆ ವಸ್ತುಗಳು ದಹಿಸಿದ ಕಾರಣದಿಂದ ಎದ್ದ ಹೊಗೆ ಆಕಾಶದೆತ್ತರಕ್ಕೆ ವ್ಯಾಪಿಸಿತ್ತು.
ಭಾನುವಾರ (ಫೆ.1) ಸಂಜೆಯೊಳಗೆ ನಗರದ ಜನವಸತಿ ಪ್ರದೇಶದಲ್ಲಿರುವ ಎಲ್ಲ ಗುಜರಿ ಅಂಗಡಿಗಳನ್ನು ಜನವಸತಿ ಇರದ ಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ನಗರಸಭೆ ಪ್ರಕಟಣೆ ತಿಳಿಸಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಚನ್ನಪಟ್ಟಣ ನಗರಸಭೆಯ ಪೌರಾಯುಕ್ತ ಮಹೇಂದ್ರ, ಈಗಾಗಲೇ ಬೇಸಿಗೆ ಕಾಲ ಪ್ರಾರಂಭವಾಗಿದೆ. ತಾಪಮಾನ ಹೆಚ್ಚಾಗಿದೆ. ಬೆಂಕಿ ಅವಘಡ ಸಂಭವಿಸಿ ಸುತ್ತಮುತ್ತಲಿನ ನಿವಾಸಿಗಳಿಗೆ ಮತ್ತು ಇತರ ಅಂಗಡಿ ಮಾಲೀಕರಿಗೆ ಹಾನಿ ಉಂಟಾಗುವ ಸಂಭವವಿದೆ. ವಾಯುಮಾಲಿನ್ಯ ಉಂಟಾಗಿ ಜೀವ ಹಾನಿ, ಪ್ರಾಣಿ ಪಕ್ಷಿಗಳಿಗೆ ತೊಂದರೆ ಉಂಟಾಗಿದೆ. ಎಲ್ಲ ಗುಜರಿ ಅಂಗಡಿಗಳನ್ನು ಜನವಾಸವಿರುವ ಪ್ರದೇಶಗಳಿಂದ ಜನ ವಸತಿ ಇರದ ನಗರದ ಹೊರವಲಯಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.
ಸ್ಥಳಾಂತರ ಮಾಡದಿದ್ದರೆ ಫೆ.2ರ ಸೋಮವಾರದಂದು ಚನ್ನಪಟ್ಟಣ ನಗರಸಭೆ ವತಿಯಿಂದ ಎಲ್ಲ ಗುಜರಿ ಅಂಗಡಿಗಳನ್ನು ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.