ADVERTISEMENT

ಚನ್ನಪಟ್ಟಣ ಉಪಚುನಾವಣೆ | ಅಭ್ಯರ್ಥಿಯನ್ನು BJP ಹೈಕಮಾಂಡ್‌ ನಿರ್ಧರಿಸಲಿದೆ: ನಿಖಿಲ್

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2024, 15:13 IST
Last Updated 25 ಆಗಸ್ಟ್ 2024, 15:13 IST
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ   

ಬೆಂಗಳೂರು: ‘ಚನ್ನಪಟ್ಟಣ ಉಪಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಬಿಜೆಪಿ ಹೈಕಮಾಂಡ್‌ ನಿರ್ಧರಿಸಲಿದೆ. ಈ ಸಂಬಂಧ ವರದಿಯನ್ನು ಕಳುಹಿಸಿದ್ದೇವೆ’ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಪಂಚಾಯತಿ ಮತ್ತು ವಿಧಾನಸಭಾ ಉಪ ಚುನಾವಣೆಗೆ ಸಿದ್ದತೆ ಸಂಬಂಧ ನಗರದಲ್ಲಿನ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು. ‘ಕೆಲವೇ ದಿನಗಳಲ್ಲಿ ಎನ್‌ಡಿಎ ತನ್ನ ಅಭ್ಯರ್ಥಿಯನ್ನು ಘೋಷಿಸಲಿದೆ’ ಎಂದರು.

‘ಚನ್ನಪಟ್ಟಣ ಜೆಡಿಎಸ್‌ನ ಭದ್ರಕೋಟೆ. ಬಿಜೆಪಿಯ ಸಿ.ಪಿ. ಯೋಗೇಶ್ವರ್ ಅವರ ವರ್ಚಸ್ಸು ಸೇರಿದರೆ, ಎನ್‌ಡಿಎ ಅಭ್ಯರ್ಥಿಯ ಗೆಲುವು ಖಚಿತ. ಕಾಂಗ್ರೆಸ್‌ಗೆ ಅಲ್ಲಿ ಹೆಜ್ಜೆ ಇಡಲೂ ಆಗುವುದಿಲ್ಲ’ ಎಂದರು. 

ADVERTISEMENT

‘ಕುಮಾರಸ್ವಾಮಿ ಅವರ ಪ್ರಭಾವ ಹಳೇ ಮೈಸೂರು ಮಾತ್ರವಲ್ಲ, ಉತ್ತರ ಕರ್ನಾಟಕದಲ್ಲೂ ಇದೆ ಎಂಬುದನ್ನು ಲೋಕಸಭಾ ಚುನಾವಣೆ ಸಾಬೀತು ಮಾಡಿದೆ. ಹೀಗಾಗಿ ಅವರನ್ನು ಕಟ್ಟಿಹಾಕಲು ಕಾಂಗ್ರೆಸ್‌ ನಾಯಕರು ದೆಹಲಿಗೆ ಹೋಗಿದ್ದರು. ಕುಮಾರಸ್ವಾಮಿ ವಿರುದ್ಧದ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ರಾಜ್ಯಪಾಲರ ಮೇಲೆ ಒತ್ತಡ ಹಾಕುವ ಮೂಲಕ, ಅವರನ್ನು ಮಟ್ಟ ಹಾಕಲು ಯತ್ನ ನಡೆಯುತ್ತಿದೆ’ ಎಂದೂ ನಿಖಿಲ್ ಆರೋಪಿಸಿದರು.

ಗಣಿಭೂಮಿ ಹಂಚಿಕೆಗೆ ಕುಮಾರಸ್ವಾಮಿ ಸಹಿ ಮಾಡಿಲ್ಲ. ಮುಡಾ ಹಗರಣ ಮುಚ್ಚಿಹಾಕಲು ಇಲ್ಲಸಲ್ಲದ ಸುಳ್ಳುಗಳನ್ನು ಹೇಳುತ್ತಿದ್ದಾರೆ
ನಿಖಿಲ್‌ ಕುಮಾರಸ್ವಾಮಿ ಜೆಡಿಎಸ್‌ ಯುವಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.