ADVERTISEMENT

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅಗತ್ಯ: ವಕೀಲ ಡಿ.ಎಚ್. ಮಲ್ಲಿಕಾರ್ಜುನಯ್ಯ

ಮಾಗಡಿ ತಾಲ್ಲೂಕು ಒಕ್ಕಲಿಗರ ಸಂಘದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 4:20 IST
Last Updated 16 ಏಪ್ರಿಲ್ 2021, 4:20 IST
ಮಾಗಡಿ ತಾಲ್ಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಡಿ.ಎಚ್‌. ಮಲ್ಲಿಕಾರ್ಜುನಯ್ಯ ಅವರನ್ನು ಸಂಘದ ಅಧ್ಯಕ್ಷ ಟಿ.ಆರ್‌. ರಾಮಕೃಷ್ಣಯ್ಯ ಸನ್ಮಾನಿಸಿದರು. ಎಚ್‌.ಜೆ. ಪುರುಷೋತ್ತಮ್‌, ಸೀಬೇಗೌಡ, ನರಸಿಂಹಮೂರ್ತಿ, ಪೂರ್ಣಿಮಾ ಇದ್ದರು
ಮಾಗಡಿ ತಾಲ್ಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಡಿ.ಎಚ್‌. ಮಲ್ಲಿಕಾರ್ಜುನಯ್ಯ ಅವರನ್ನು ಸಂಘದ ಅಧ್ಯಕ್ಷ ಟಿ.ಆರ್‌. ರಾಮಕೃಷ್ಣಯ್ಯ ಸನ್ಮಾನಿಸಿದರು. ಎಚ್‌.ಜೆ. ಪುರುಷೋತ್ತಮ್‌, ಸೀಬೇಗೌಡ, ನರಸಿಂಹಮೂರ್ತಿ, ಪೂರ್ಣಿಮಾ ಇದ್ದರು   

ಮಾಗಡಿ: ‘ತಾಲ್ಲೂಕಿನಲ್ಲಿ ಬಹುಸಂಖ್ಯಾತರಾಗಿರುವ ಒಕ್ಕಲಿಗ ಸಮುದಾಯದವರನ್ನು ಸಂಘಟಿಸಿ, ರೈತಾಪಿ ವರ್ಗದವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಬೇಕು’ ಎಂದು ವಕೀಲ ಡಿ.ಎಚ್. ಮಲ್ಲಿಕಾರ್ಜುನಯ್ಯ ತಿಳಿಸಿದರು.

ತಾಲ್ಲೂಕು ಒಕ್ಕಲಿಗರ ಸಂಘದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರಿಗೆ ಸಂಘದಿಂದ ಗುರುವಾರ ನೀಡಿದ್ದ ಬೀಳ್ಕೊಡುಗೆ ಸ್ವೀಕರಿಸಿ ಅವರು ಮಾತನಾಡಿದರು.

ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದ ಕೂಟ್ಲು ತಿಮ್ಮರಾಯಪ್ಪ, ಮಾಜಿ ಸಚಿವ ಎಚ್.ಜಿ. ಚನ್ನಪ್ಪ, ತಗ್ಗಿಕುಪ್ಪೆ ರಂಗೇಗೌಡ, ಹೊಸಪೇಟೆ ಜವರಪ್ಪ, ಬಿ.ಎಲ್. ಲಕ್ಕೇಗೌಡ, ರಾಧಾಕೃಷ್ಣೇಗೌಡ, ನಿವೃತ್ತ ಶಿಕ್ಷಕರಾದ ಎಚ್. ರಂಗಪ್ಪ, ಎಂ. ರೇವಣ್ಣ, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಒಕ್ಕಲಿಗರ ಸಂಘದ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದರು.

ADVERTISEMENT

ಬಿ.ಎಲ್‌. ಲಕ್ಕೇಗೌಡ ಅವರು ಕೆಂಪೇಗೌಡ ಒಕ್ಕಲಿಗರ ವಿದ್ಯಾರ್ಥಿ ನಿಲಯ ಆರಂಭಿಸಿದ್ದರು. ವಿದ್ಯಾರ್ಥಿ ನಿಲಯವನ್ನು ಕೆಂಪೇಗೌಡ ಪ್ರೌಢಶಾಲೆಯನ್ನಾಗಿ ಪರಿವರ್ತಿಸಲಾಯಿತು. 10 ವರ್ಷಗಳಿಂದಲೂ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಿದೆ. ತಾಲ್ಲೂಕಿನಲ್ಲಿ ಒಕ್ಕಲಿಗರಲ್ಲಿ ಬಡ ಕುಟುಂಬಗಳು ಹೆಚ್ಚಿವೆ. ಒಕ್ಕಲಿಗರ ಬಲವರ್ಧನೆಗೆ ಸಂಘದ ಪದಾಧಿಕಾರಿಗಳು ಪ್ರಾಮಾಣಿಕವಾಗಿ ದುಡಿಯಬೇಕಿದೆ ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಟಿ.ಆರ್. ರಾಮಕೃಷ್ಣಯ್ಯ ಮಾತನಾಡಿ, ವಕೀಲ ವೃತ್ತಿಯೊಂದಿಗೆ ಸಮುದಾಯದ ಸಂಘಟನೆ ಮತ್ತು ಬೆಳಗವಾಡಿ ಲಕ್ಕೇಗೌಡರೊಂದಿಗೆ ಸೇರಿ ದಿ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪಿಸಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿರುವ ಡಿ.ಎಚ್. ಮಲ್ಲಿಕಾರ್ಜುನಯ್ಯ ಇಳಿವಯಸ್ಸಿನಲ್ಲಿ ಕಾರ್ಯದರ್ಶಿ ಹುದ್ದೆ ತ್ಯಜಿಸಿದ್ದಾರೆ. ಅವರ ಮಾರ್ಗದರ್ಶನ ನಮಗೆಲ್ಲರಿಗೂ ಅಗತ್ಯ. ಒಕ್ಕಲಿಗರ ಮಕ್ಕಳಿಗೆ ಸ್ಪರ್ಧಾತ್ಮಕ ಶಿಕ್ಷಣ ನೀಡಿ ಉತ್ತಮ ಅಧಿಕಾರಿಗಳನ್ನಾಗಿಸಲು ಸಂಘದ ಪದಾಧಿಕಾರಿಗಳೆಲ್ಲರೂ ದುಡಿಯಲಿದ್ದೇವೆ ಎಂದರು.

ಸಂಘದ ಉಪಾಧ್ಯಕ್ಷ ಸೀಬೇಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಜೆ. ಪುರುಷೋತ್ತಮ್, ಖಜಾಂಚಿ ನರಸಿಂಹಮೂರ್ತಿ ಮಾತನಾಡಿದರು. ಸಂಘದ ನಿರ್ದೇಶಕರಾದ ಡಿ.ಸಿ. ಶಿವಣ್ಣ, ಅಂಗಡಿ ನಾಗರಾಜು, ಜಯರಾಮಯ್ಯ, ವಿಜಯಕುಮಾರ್, ಪೂರ್ಣಿಮಾ, ಮಂಜುನಾಥ್, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.