ADVERTISEMENT

ಅಂಗಡಿ ಮಳಿಗೆ ತೆರವು: ಭರವಸೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2023, 5:59 IST
Last Updated 12 ಸೆಪ್ಟೆಂಬರ್ 2023, 5:59 IST
ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ಮಾಡುವಂತೆ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು
ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ಮಾಡುವಂತೆ ದಲಿತ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು   

ಹಾರೋಹಳ್ಳಿ: ಹಾರೋಹಳ್ಳಿ ಪಟ್ಟಣ ಪಂಚಾಯಿತಿ ಮುಂಭಾಗ ದಲಿತ ಸಂಘಟನೆಗಳು ಅಂಗಡಿ ಮಳಿಗೆಗಳ ಹರಾಜು ಮಾಡುವಂತೆ ಒತ್ತಾಯಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

ಸಮತಾ ಸೈನಿಕ ದಳದ ರಾಜ್ಯ ಯುವ ಘಟಕದ ಅಧ್ಯಕ್ಷ ಜಿ. ಗೋವಿಂದಯ್ಯ ಮಾತನಾಡಿ, ಅಧಿಕಾರಿಗಳು 20 ವರ್ಷದಿಂದ ಪ.ಪಂ ವ್ಯಾಪ್ತಿಯ ಅಂಗಡಿಗಳ ಹರಾಜು ಮಾಡದೆ ಅಸಡ್ಡೆ ತೋರಿದ್ದಾರೆ. ಹಿಂದೆ ನಿಗದಿ ಮಾಡಿದ ಬಾಡಿಗೆ ಪಡೆಯುತ್ತಿದ್ದು ಇದುವರೆಗೂ ಹೊಸ ಹರಾಜು ಪ್ರಕ್ರಿಯೆ ಮಾಡಿಲ್ಲ. ಆಗಸ್ಟ್ 23 ರಂದು ಬಹಿರಂಗ ಹರಾಜು ನಡೆಸಲು ತೀರ್ಮಾನಿಸಿ ಡಿ.ಡಿ ಪಡೆದು ಏಕಾಏಕಿ ಪ್ರಭಾವಿಗಳ ಒತ್ತಡಕ್ಕೆ ಮಣಿದು ಹರಾಜು ಪ್ರಕ್ರಿಯೆ ಮಾಡದೆ ಅಧಿಕಾರಿಗಳು ಕೇವಲ ಸಬೂಬು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದರು.

ಮೀಸಲಾತಿ ಪ್ರಕಾರ ಹಂಚಿಕೆ ಮಾಡಬೇಕು. ದಲಿತರಿಗೆ ಅಂಗಡಿ ಮಳಿಗೆ ಹಂಚಿಕೆಯಾಗಬಹುದು ಎಂಬ ಉದ್ದೇಶಕ್ಕೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಮುಂದೂಡಲಾಗಿದೆ ಎಂದು ಆರೋಪಿಸಿದರು.

ADVERTISEMENT

34 ಅಂಗಡಿ ಮಳಿಗೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಂಗಡಿ ಮಳಿಗೆಗಳ ಹರಾಜು ಪ್ರಕಟಣೆ ಹೊರಡಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗುವುದು. ರಸ್ತೆ ಅಗಲೀಕರಣಕ್ಕೆ ಒಳಪಡುವ ಮಳಿಗೆಗಳನ್ನು 30 ದಿನದೊಳಗೆ ನಿಯಮಾನುಸಾರ ತೆರವುಗೊಳಿಸಲು ಕ್ರಮವಹಿಸಲಾಗುವುದು ಎಂದು ಮುಖ್ಯಾಧಿಕಾರಿ ಹಿಂಬರಹ ನೀಡಿದರು. ನಂತರ ಹೋರಾಟಗಾರರು ಪ್ರತಿಭಟನೆ ವಾಪಸ್‌ ಪಡೆದರು.

ಸಮತಾ ಸೈನಿಕ ದಳದ ಕೋಟೆ ಕುಮಾರ್, ಹಾರೋಹಳ್ಳಿ ಚಂದ್ರು, ಗಿರೇನಹಳ್ಳಿ ಶಿವಕುಮಾರ್, ಕೋಟೆ ಪ್ರಕಾಶ್, ಮರಳವಾಡಿ ಮಂಜು, ಬೆಣಚುಕಲ್ ದೊಡ್ಡಿ ರುದ್ರೇಶ್, ಮೇಡಮಾರನಹಳ್ಳಿ ಸುರೇಶ್, ನವೀನ್, ರವೀಂದ್ರ, ಶ್ಯಾಮ್ ಸುಂದರ್, ಕೆಬ್ಬೆದೊಡ್ಡಿ ಗೋವಿಂದು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.