ಬಿಡದಿ: ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ವಹಿವಾಟು ನಡೆಸುವ ನಿರ್ಧಾರವನ್ನು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡಲಾಗಿದೆ ಎಂದು ತೋಟಗಾರಿಕೆ ಸಚಿವ ನಾರಾಯಣ ಗೌಡ ತಿಳಿಸಿದರು.
ಇಲ್ಲಿನ ನಾಮಧಾರಿ ಸೀಡ್ಸ್ ಕಂಪನಿಗೆ ಭೇಟಿ ನೀಡಿದ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು. ಮಾರುಕಟ್ಟೆಗಳ ಬಳಿ ಸೋಂಕು ನಿರೋಧಕ ದ್ರಾವಣ ಸಿಂಪಡನೆ ಟನಲ್ಗಳನ್ನು ಈಗಾಗಲೇ ನಿರ್ಮಾಣ ಮಾಡಲಾಗಿದೆ. ಕೆಲವಡೆ ಮಾರುಕಟ್ಟೆಯಲ್ಲಿನ ವಹಿವಾಟು ಅವಧಿ ಬದಲಿಸಿದ್ದು, ಜನಸಂದಣಿ ನಿಯಂತ್ರಣಕ್ಕೆ ಪ್ರಯತ್ನ ನಡೆದಿದೆ ಎಂದರು.
ಲಾಕ್ಡೌನ್ನ ಮೊದಲ ಹತ್ತು ದಿನ ರೇಷ್ಮೆಗೂಡು ಮಾರುಕಟ್ಟೆಗಳು ಬಂದ್ ಆಗಿದ್ದವು. ಇದರಿಂದಾಗಿ ರೈತರು ನಷ್ಟ ಅನುಭವಿಸಿದ್ದರು. ಗೂಡು ಮಾರಾಟ ದರ ಕುಸಿದಿತ್ತು. ಈಗ ₹300ರ ದರದಲ್ಲಿ ವಹಿವಾಟು ನಡೆದಿದ್ದು, ಬೆಲೆ ಇನ್ನಷ್ಟು ಹೆಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಮಂಡ್ಯದಲ್ಲಿ ಪತ್ರಕರ್ತರ ತಪಾಸಣೆ ವೇಳೆ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಹಾಗೂ ಅವರ ಬೆಂಗಲಿಗರು ಮಾಧ್ಯಮದವರ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ. ಸದ್ಯ ಅವರಿಗೆ ಜಾಮಿನು ದೊರೆತಿರಬಹುದು. ಆದರೆ, ಸರ್ಕಾರ ಕ್ರಮ ಕೈಗೊಳ್ಳುವುದು ಖಚಿತ’ ಎಂದರು.‘
’ಶ್ರೀಕಂಠೇಗೌಡರ ನಡೆಯನ್ನು ಅವರ ಪಕ್ಷದವರೇ ಖಂಡಿಸಿದ್ದಾರೆ. ಅವರು ಶಿಕ್ಷಕರಾಗಿದ್ದವರು. ಅವರ ಬಗ್ಗೆ ನಮಗೆ ಗೌರವ ಇದೆ. ಪ್ರತಿ ವಿಚಾರಕ್ಕೂ ಮಾಧ್ಯಮದ ಮುಂದೆ ಬರುತಿದ್ದರು. ಮಾಧ್ಯಮದವರಿಂದ ಪ್ರಚಾರ ಪಡೆದು ಸಾಮಾನ್ಯ ಶಿಕ್ಷ ಕನಿಂದ ಎಂ ಎಲ್ ಸಿ ಆಗಿದ್ದಾರೆ. ಅವರು ತಮ್ಮ ಮಗನಿಗೆ ಬುದ್ಧಿವಾದ ಹೇಳಬೇಕಿತ್ತು’ ಎಂದರು.
ಕೈದಿಗಳ ಸ್ಥಳಾಂತರಕ್ಕೆ ಸಮರ್ಥನೆ
ಪಾದರಾಯನಪುರ ದಾಂದಲೆ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡಿದ ಕುರಿತು ಪ್ರತಿಕ್ರಿಯಿಸಿ ‘ಕೆಲವೊಮ್ಮೆ ಸರ್ಕಾರಗಳು ನಿರ್ಧಾರ ಮಾಡುವಾಗ ವ್ಯತ್ಯಾಸ ಆಗುವುದು ಸಹಜ. ಸದ್ಯ ಅವರನ್ನು ವಾಪಸ್ ಬೆಂಗಳೂರಿಗೆ ಕಳುಹಿಸಲಾಗಿದೆ. ರಾಮನಗರ ಸೇಫ್ ಝೋನ್. ಇಲ್ಲಿಗೆ ಅವರನ್ನು ಕಳುಹಿಸಲಾಗಿದೆ ಎಂಬುದೆಲ್ಲ ಸರಿಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಾರೂ ಸುರಕ್ಷಿತರಲ್ಲ. ಇದು ಇಂದಿಗೆ ಮುಗಿಯುವ ವಿಚಾರವೂ ಅಲ್ಲ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.