ಕನಕಪುರ: ಹೆಣ್ಣಾನೆಯೊಂದು ಮರಿಗೆ ಜನ್ಮನೀಡಿದ ನಂತರ ಸಾವನ್ನಪ್ಪಿರುವುದು ಸಂಗಮ ವನ್ಯಜೀವಿ ವಲಯ ಮುತ್ತತ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಸಾತನೂರು ಹೋಬಳಿ ವ್ಯಾಪ್ತಿಯ ಮುತ್ತತ್ತಿ ಕಾವೇರಿ ವನ್ಯಜೀವಿ ವಲಯದಲ್ಲಿ ಅರಣ್ಯ ರಕ್ಷಕರು ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದಾಗ ಕೊಲ್ಕೋಟೆ ಹಳ್ಳದಲ್ಲಿ ಸುಮಾರು 15 ವರ್ಷದ ಆನೆ ಸತ್ತಿರುವುದು ಮಂಗಳವಾರ ಗೊತ್ತಾಗಿದೆ. ಕಾವೇರಿ ವನ್ಯಜೀವಿ ವಿಭಾಗದ ಎಸಿಎಫ್ ಅಂಕರಾಜು, ಆರ್ಎಫ್ಒ ದೇವರಾಜು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವೆಂಕಟರಾಯನದೊಡ್ಡಿ ಪಶು ವೈದ್ಯಾಧಿಕಾರಿ ಸುಖೇಶ್ ಆನೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿಕೊಟ್ಟಿದ್ದಾರೆ. ಹೆಣ್ಣಾನೆ ಪ್ರಸವ ನಂತರ ಗರ್ಭಕೋಶದಿಂದ ಸತ್ತೆ(ತ್ಯಾಜ್ಯ) ಬೀಳದೆ ಹೊಟ್ಟೆಯಲ್ಲಿ ಕೊಳೆತಿರುವುದರಿಂದ ಮರಿಹಾಕಿದ 8 ದಿನಗಳ ನಂತರ ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.