ADVERTISEMENT

ಕನಕಪುರ: ಸಾವಿತ್ರಿಬಾಯಿ ಫುಲೆಗೆ ಭಾರತ ರತ್ನ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 4:39 IST
Last Updated 8 ಜನವರಿ 2026, 4:39 IST
ಕನಕಪುರ ನಗರದಲ್ಲಿ ಧಮ್ಮ ದೀವಿಗೆ ಟ್ರಸ್ಟ್ ವತಿಯಿಂದ ನಡೆದ ಸಾವಿತ್ರಿಬಾಪುಲೆ ಜನ್ಮದಿನಾಚರಣೆಯ ಮೆರವಣಿಗೆ ಕಾರ್ಯಕ್ರಮಕ್ಕೆ ದೇಗುಲ ಮಠದ ಹಿರಿಯ ಶ್ರೀ ಚನ್ನಬಸವ ಸ್ವಾಮೀಜಿ ಚಾಲನೆ ನೀಡಿದರು
ಕನಕಪುರ ನಗರದಲ್ಲಿ ಧಮ್ಮ ದೀವಿಗೆ ಟ್ರಸ್ಟ್ ವತಿಯಿಂದ ನಡೆದ ಸಾವಿತ್ರಿಬಾಪುಲೆ ಜನ್ಮದಿನಾಚರಣೆಯ ಮೆರವಣಿಗೆ ಕಾರ್ಯಕ್ರಮಕ್ಕೆ ದೇಗುಲ ಮಠದ ಹಿರಿಯ ಶ್ರೀ ಚನ್ನಬಸವ ಸ್ವಾಮೀಜಿ ಚಾಲನೆ ನೀಡಿದರು   

ಕನಕಪುರ: ದೇಶದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಸಾವಿತ್ರಿಬಾಯಿ ಫುಲೆ ಅವರಿಗೆ ಮರಣೋತ್ತರ ಭಾರತ ರತ್ನ ನೀಡಿ ಗೌರವಿಸಬೇಕು ಮತ್ತು ಜ. 3ರಂದು ಸರ್ಕಾರ ರಾಷ್ಟ್ರೀಯ ಶಿಕ್ಷಕಿ ದಿನವನ್ನಾಗಿ ಘೋಸಿಸುವಂತೆ ಬಿಹಾರದ ವಿನಯಚಾರ್ಯ ಬಂತೇಜಿ ಒತ್ತಾಯಿಸಿದರು.

ಧಮ್ಮದೀವಿಗೆ ಚಾರಿಟಬಲ್ ಟ್ರಸ್ಟ್ ಬುಧವಾರ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಫುಲೆ ದಂಪತಿ ಹೋರಾಟ ಮತ್ತು ಜೀವನ ಚರಿತ್ರೆಯನ್ನು ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು.

ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ಮತ್ತು ಶಾರದಾ ಪೂಜೆಗೆ ನೀಡುತ್ತಿರುವ ಮಹತ್ವವನ್ನು ದೇಶದ ಉದ್ದಗಲಕ್ಕೂ ಅಕ್ಷರ ವಂಚಿತರಿಗೆ ಶಿಕ್ಷಣ ನೀಡಿದ ಸಾವಿತ್ರಿಬಾಯಿ ಫುಲೆ ಅವರಿಗೆ ನೀಡದಿರುವುದು ದುರಂತ ಎಂದರು.

ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಸರ್ಕಾರಿ ಶಾಲೆಗಳಲ್ಲಿ ಆಚರಿಸದಿರುವುದು ದುರದೃಷ್ಟಕರ. ಇತಿಹಾಸದಲ್ಲಿ ಕೆಲವರನ್ನು ಅಗತ್ಯಕ್ಕಿಂತಲೂ ಹೆಚ್ಚು ವೈಭವೀಕರಿಸಲಾಗಿದೆ ಎಂದು ಟ್ರಸ್ಟ್‌ನ ಮಲ್ಲಿಕಾರ್ಜುನ್ ಹೇಳಿದರು.

ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಮಹಾ ಪಾಪ ಎಂದು ಭಾವಿಸಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಅವರು ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ಸೇರಿ ದೇಶದ ಮೊದಲ ಬಾಲಕಿಯರ ಶಾಲೆ ಆರಂಭ ಮಾಡಿದರು. ಪಠ್ಯಪುಸ್ತಕ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಇಂತಹ ನಿಜವಾದ ಮಹನೀಯರ ಇತಿಹಾಸವನ್ನು ಉದ್ದೇಶಪೂರ್ಕವಾಗಿ ಮರೆಮಾಚಲಾಗಿದೆ ಎಂದರು.

ADVERTISEMENT

ಬೀದರ್ ಧಮ್ಮದೀವಿಗೆ ಟ್ರಸ್ಟ್ ನವಜ್ಯೋತಿ ಬಂತೇಜಿ, ಹಾಸನ್ ರಘು, ಡಾ.ಬಿ.ಸಿ. ಬೊಮ್ಮಯ್ಯ, ಸುಮಿತ್ರ ಬೊಮ್ಮಯ್ಯ, ಡಾ.ತೇಜೋವತಿ, ಮರಸಪ್ಪ ರವಿ, ಸಂಪತ್ ಕುಮಾರ್, ರೈತ ಸಂಘದ ಜಿಲ್ಲಾಧ್ಯಕ್ಷ ಅನು ಕುಮಾರ್, ಜೆ.ಎಂ. ಶಿವಲಿಂಗಯ್ಯ, ಚಿನ್ನಸ್ವಾಮಿ, ಚನ್ನಪಟ್ಟಣ ಕುಮಾರ್, ನವೀನ್ ಕುಮಾರ್, ಗಿರೀಶ್, ಬಾನಂದೂರು ಶಿವಕುಮಾರ್, ಬಸವರಾಜು ಭಾಗವಹಿಸಿದ್ದರು. 

ಮೆರವಣಿಗೆಯಲ್ಲಿ ಪಾಲ್ಗೊಂಡಿರುವ ಕಲಾತಂಡಗಳು
ವೇದಿಕೆ ಕಾರ್ಯಕ್ರಮವನ್ನು ಬಂತೇಜಿಯವರು ಉದ್ಘಾಟಿಸಿದರು

ಆಕರ್ಷಕ ಮೆರವಣಿಗೆ

ಗೌತಮ ಬುದ್ಧ, ಸಾವಿತ್ರಿ ಬಾಯಿ ಫುಲೆ, ಅಂಬೇಡ್ಕರ್ ಭಾವಚಿತ್ರ ಸಾರೋಟದಲ್ಲಿಟ್ಟು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಹೊರಟ ಮೆರವಣಿಗೆ ಮಳಗಾಳು ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಕೊನೆಗೊಂಡಿತ್ತು. ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು, ಮಹಿಳೆಯರು ಹೆಜ್ಜೆ ಹಾಕಿದರು. ಪಟದ ಕುಣಿತ, ಪೂಜಾ ಕುಣಿತ, ಗೊಂಬೆ ಕುಣಿತ, ಕತ್ತಿ ವರಸೆ, ಮಹಿಷಿ, ವೀರಬಾಹು ಸೇರಿದಂತೆ ಹಲವು ಕಲಾತಂಡಗಳು ಎಲ್ಲರ ಗಮನ ಸೆಳೆದವು. ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟ್ಯಮಯೂರಿ ಕಲಾ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಐದು ಚಿನ್ನದ ಪದಕ ಪಡೆದ ಭರತ್ ಕುಮಾರ್ ಮತ್ತು ಶಿಕ್ಷಕಿ ಸರಿತಾ ಕುಮಾರಿ, ರಾಷ್ಟ್ರೀಯ ಕ್ರೀಡಾಪಟು ರಶ್ಮಿತಾ ಗೌಡ, ಸಿಂಬ ಬಸವರಾಜು, ಮಹದೇವಸ್ವಾಮಿ ಅವರಿಗೆ ಧಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.