ADVERTISEMENT

ಕೋವಿಡ್ ಕರ್ತವ್ಯದಿಂದ ಶಿಕ್ಷಕರ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಮೇ 2021, 2:50 IST
Last Updated 26 ಮೇ 2021, 2:50 IST
ನೀಲಿ ರಮೇಶ್‌
ನೀಲಿ ರಮೇಶ್‌   

ಕನಕಪುರ: ‘ಸರ್ಕಾರ 60 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಿದೆ. ಆದರೆ ಅವರನ್ನು ಇದುವರೆಗೂ ಕೋವಿಡ್ ವಾರಿಯರ್ಸ್ ಎಂದು ಘೋಷಣೆ ಮಾಡದೆ ಅನ್ಯಾಯ ಮಾಡುತ್ತಿದೆ’ ಎಂದು ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಿ ರಮೇಶ್‌ ಆರೋಪಿಸಿದರು.

‘ಕರ್ತವ್ಯನಿರತ ಶಿಕ್ಷಕರಿಗೆ ಕನಿಷ್ಠ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್‌ನಂತಹ ಸುರಕ್ಷಿತ ಸಾಮಗ್ರಿಗಳನ್ನು ಸಹ ಒದಗಿಸಿಲ್ಲ. ಶಿಕ್ಷಕರು ಸೋಂಕಿತರ ನಡುವೆ ನೇರ ಸಂಪರ್ಕದಲ್ಲಿದ್ದು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಈ ವೇಳೆ ಎಷ್ಟೋ ಶಿಕ್ಷಕರಿಗೆ ಕೊರೊನಾ ಸೋಂಕು ತಗುಲಿದೆ’ ಎಂದು ಪ್ರಕಟಣೆಯಲ್ಲಿ ಅವರು ದೂರಿದ್ದಾರೆ.

‘ಕೊರೊನಾ ಸೋಂಕು ಶಿಕ್ಷಕರಿಗೆ ದೃಢಪಟ್ಟರೆ ಅವರ ಕುಟುಂಬವು ಸೋಂಕಿನಿಂದ ಬಾಧಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಯಾವದೇ ಸೌಲಭ್ಯವನ್ನು ಒದಗಿಸದೆ, ಕೊರೊನಾ ವಾರಿಯರ್ಸ್‌ ಎಂದು ಘೋಷಣೆಯು ಮಾಡದ ಸರ್ಕಾರ ಈ ಕೂಡಲೆ ಶಿಕ್ಷಕರನ್ನು ಕೋವಿಡ್ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕೊರೊನಾ ಸಂದರ್ಭದಲ್ಲೂ ಸರ್ಕಾರ ಉಪ ಚುನಾವಣೆಯಲ್ಲಿ ಶಿಕ್ಷಕರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಂಡಿತ್ತು. ಸರ್ಕಾರ ಮತ್ತು ಶಿಕ್ಷಣ ಸಚಿವರ ಬೇಜವಾಬ್ದಾರಿಯಿಂದ ಉಪಚುನಾವಣೆ ಸೇರಿದಂತೆ, ಕೋವಿಡ್ ಕರ್ತವ್ಯ ನಿರ್ವಹಿಸಿದ ಸುಮಾರು 600ಕ್ಕೂ ಹೆಚ್ಚು ಶಿಕ್ಷಕರು ಕರ್ನಾಟಕದಲ್ಲಿ ಕೋವಿಡ್‌ಗೆ ಬಲಿಯಾಗಿದ್ದಾರೆ’ ಎಂದು ಕಿಡಿ ಕಾರಿದರು.

‘ಇಷ್ಟೊಂದು ಶಿಕ್ಷಕರ ಸಾವಿಗೆ ಸರ್ಕಾರವೇ ನೇರ ಹೊಣೆಯಾಗಿದೆ. ಕೋವಿಡ್‌ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ ತಲಾ ₹30 ಲಕ್ಷ ಪರಿಹಾರ ನೀಡಬೇಕು. ಸುರಕ್ಷತಾ ಸಾಮಗ್ರಿಗಳ ವಿತರಣೆ, ಶಿಕ್ಷಕರು ಮತ್ತು ಅವರ ಕುಟುಂಬಗಳಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಬೇಕು. ಕೊರೊನಾ ವಾರಿಯರ್ಸ್‌ ಎಂದು ಘೋಷಣೆ ಮಾಡಿ ಅವರಿಗೆ ಕೊರೊನಾ ಸಂಬಂಧಿತ ಎಲ್ಲಾ ಸವಲತ್ತುಗಳನ್ನು ನೀಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.